ಮುಂದುವರಿಯುತ್ತಿರುವ ಧಾರಾಕಾರ ಮಳೆ: ವಿವಿಧೆಡೆಗಳಲ್ಲಿ ನಾಶ ನಷ್ಟ
ಪೈವಳಿಕೆ: ಸುರಿಯುತ್ತಿರುವ ಧಾರಕಾರ ಮಳೆಗೆ ವಿವಿಧ ಕಡೆಗಳಲ್ಲಿ ಹಾನಿ ಸಂಭವಿಸುತ್ತಿದೆ. ಪೈವಳಿಕೆ ವಿಲ್ಲೇಜ್ಗೆ ಒಳಪಟ್ಟ ಬಾಯಿಕಟ್ಟೆ ಕಳಾಯಿ ಮಲೆನಾಡು ಹೆದ್ದಾರಿಯಲ್ಲಿ ಬಾಳೆ ಹಿತ್ಲು ಎಂಬಲ್ಲಿ ಮೊನ್ನೆ ರಾತ್ರಿ ಗುಡ್ಡೆಯಿಂದ ಮಣ್ಣು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈ ಭಾಗದಲ್ಲಿ ಇನ್ನೂ ಮಣ್ಣು ಕುಸಿತ ಉಂಟಾದರೆ ಸಂಚಾರ ಮೊಟಕು ಗೊಳ್ಳುವ ಭೀತಿಯಿದೆ. ಈ ಗುಡ್ಡೆ ಪರಿಸರದಲ್ಲಿ ರುವ ಅನಿತಾ ಬಾಬು, ಸುಜಾತಾ ರಮೇಶ, ರೋಹಿಣಿ ನಾರಾಯಣ ಎಂಬೀ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳ ಮನೆಗಳು ಜರಿದು ಬೀಳುವ ಸ್ಥಿತಿಯಲ್ಲಿದೆ. ಇದೇ ವೇಳೆ ಲಾಲ್ಭಾಗ್ನಲ್ಲಿ ಚಿದಾನಂದ ಎ. ಎಂಬ ವರ ಮನೆಯ ಸುತ್ತುಗೋಡೆ ಜರಿದು ಬಿದ್ದಿದೆ. ರಸ್ತೆಯಿಂದ ಮಳೆ ನೀರು ಹರಿದಿರುವುದು ಆವ ರಣ ಗೋಡೆ ಜರಿಯಲು ಕಾರಣವೆನ್ನಲಾಗಿದೆ. ಸ್ಥಳಕ್ಕೆ ವಿಲ್ಲೇಜ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹೊಸಂಗಡಿ ಪೇಟೆಯಲ್ಲಿ ನೀರು ಸಂಗ್ರಹಗೊಂಡು ವ್ಯಾಪಾರ ಸಂಸ್ಥೆಗಳಿಗೆ ನುಗ್ಗಿ ಭಾರೀ ನಾಶ ನಷ್ಟ ಸಂಭವಿಸಿದೆ. ಪೇಟೆಯ ಎಂ.ಎಂ. ಪ್ಲಾಜಾದ ಕೆಳ ಹಂತಸ್ತಿನಲ್ಲಿರುವ ವ್ಯಾಪಾರ ಮಳಿಗೆಗಳಿಗೆ ನಿನ್ನೆ ಮಳೆ ನೀರು ನುಗ್ಗಿದೆ. ಇದರಿಂದ ಅಂಗಡಿಗಳಲ್ಲಿದ್ದ ಹಲವಾರು ಸಾಮಗ್ರಿಗಳು ನಾಶವಾಗಿವೆ. ಈ ಪರಿಸರದಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಲಾಗಿದೆಯಾದರೂ ಸರಿಯಾಗಿ ನೀರು ಹರಿದು ಹೋಗದ ಕಾರಣ ವ್ಯಾಪಾರ ಸಂಸ್ಥೆಗಳಿಗೆ ನೀರು ನುಗ್ಗಿದೆ ಎನ್ನಲಾಗಿದೆ. ಹೆದ್ದಾರಿ ಇಲಾಖೆ ಅಧಿಕಾರಿಗಳು, ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಇಲ್ಲದಿದ್ದರೆ ಈ ಸ್ಥಳದಲ್ಲಿ ವ್ಯಾಪಾರ ಮುಂದುವರಿಸಲು ಅಸಾಧ್ಯ ವಾದಿತೆಂದು ವ್ಯಾಪಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಂಜೇಶ್ವರ ಘಟಕ ಅಧ್ಯಕ್ಷ ಬಶೀರ್ ಸಹಿತ ಪದಾಧಿಕಾರಿಗಳು ಭೇಟಿ ನೀಡಿದರು.