ಮುಳ್ಳೇರಿಯ ಬಳಿಯ ಕಾರ್ಲೆಯಲ್ಲಿ ಕಾರು ಮಗುಚಿ 2 ವರ್ಷದ ಮಗು ದುರ್ಮರಣ
ಮುಳ್ಳೇರಿಯ: ಇಲ್ಲಿಗೆ ಸಮೀಪದ ಕಾರ್ಲೆಯಲ್ಲಿ ಕಾರೊಂದು ಮಗುಚಿ ಬಿದ್ದಾಗ ಅದರಡಿಗೆ ಸಿಲುಕಿ 2 ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ಕಾರ್ಲೆ ಪರಿಸರದಲ್ಲಿ ಶೋಕಸಾಗರ ಸೃಷ್ಟಿಸಿದೆ. ಹರಿ-ಶ್ರೀವಿದ್ಯಾ ದಂಪತಿ ಪುತ್ರಿ ಹೃದ್ಯಾನಂದ (2) ಮೃತಪಟ್ಟ ಮಗು. ನಿನ್ನೆ ಸಂಜೆ ೬ ಗಂಟೆ ವೇಳೆಗೆ ಸ್ಥಳೀಯರ ಕಣ್ಣಲ್ಲಿ ನೀರು ಹರಿಸಿದ ಈ ಅಪಘಾತ ಸಂಭವಿಸಿದೆ. ಹರಿ ಹಾಗೂ ಕುಟುಂಬ ಕಾರಿನಲ್ಲಿ ತೆರಳಿ ಹಿಂತಿರುಗಿದ್ದರು. ಪತ್ನಿ ಹಾಗೂ ಮಕ್ಕಳನ್ನು ಮನೆಗೆ ತಲುಪಿಸಿದ ಬಳಿಕ ಹರಿ ಕಾರು ಸಹಿತ ಮತ್ತೆ ತೆರಳಿದ್ದರು. ಮನೆ ಸಮೀಪದ ಏರು ರಸ್ತೆಯಲ್ಲಿ ಕಾರು ಆಫ್ ಆಗಿದ್ದು, ಇದನ್ನು ಕಂಡ ಪತ್ನಿ ಹಾಗೂ ಹಿರಿಯ ಪುತ್ರಿ ಕಾರಿನ ಸಮೀಪ ತಲುಪಿದ್ದಾರೆ. ಈ ಮಧ್ಯೆ ಕಾರು ಹಿಂದಕ್ಕೆ ಚಲಿಸಿದಾಗ ಹಿಂಬದಿ ಯಲ್ಲಿದ್ದ ಹಿರಿಯ ಪುತ್ರಿಗೆ ಗಾಯ ಉಂಟಾಗಿದೆ. ಬಳಿಕ ಕಾರು ಮಗು ಚಿದ್ದು, ಕಿರಿಯ ಪುತ್ರಿ ಹೃದ್ಯಾನಂದ ಅಡಿಯಲ್ಲಿ ಸಿಲುಕಿಕೊಂಡಿದ್ದಳು. ಕೂಡಲೇ ಈಕೆಯನ್ನು ಆಸ್ಪತ್ರೆಗೆ ತಲಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ ಘಟನೆ ಪರಿಸರದಲ್ಲಿ ಶೋಕ ಸೃಷ್ಟಿಸಿದೆ.