ಮೊದಲ ಪತಿ ಮೃತಪಟ್ಟ ಬಳಿಕ ದ್ವಿತೀಯ ವಿವಾಹಕ್ಕೂ ವಿಚ್ಛೇದನ: ಜಾಹೀರಾತು ನೀಡಿ 3ನೇ ವಿವಾಹ ಸಿದ್ಧತೆ ಮಧ್ಯೆ ಯುವಕನಿಂದ ದೌರ್ಜನ್ಯ ದೂರು
ಪೆರ್ಲ: ಮೂರನೇ ವಿವಾಹಕ್ಕಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದ ಯುವತಿಯನ್ನು ವಿವಿಧ ಕಡೆಗಳಿಗೆ ಕೊಂಡೊಯ್ದು ಮಾನಭಂಗಗೈದಿರು ವುದಾಗಿ ದೂರಲಾಗಿದೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 34ರ ಹರೆಯದ ಯುವತಿ ನೀಡಿದ ದೂರಿನಂತೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ನೋಂದಾವಣೆಯಾಗಿದೆ.
ತೃಶೂರು, ಕೈಪಮಂಗಲ ನಿವಾಸಿಯಾದ ಪ್ರಶಾಂತ್ ಯಾನೆ ಶೋಭಿ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತನ ವಿರುದ್ಧ ಇದೇ ರೀತಿಯ ಇನ್ನೂ ಹಲವು ಕೇಸುಗಳು ಇರುವುದಾಗಿ ಶಂಕಿಸಲಾಗಿದೆ. 2023 ಜೂನ್ನಿಂದ ಸೆಪ್ಟಂಬರ್ ವರೆಗೆ ವಿವಿಧ ದಿನಗಳಲ್ಲಾಗಿ ದೌರ್ಜನ್ಯಗೈದಿರು ವುದಾಗಿ ಕೇಸಿನಲ್ಲಿ ತಿಳಿಸಲಾಗಿದೆ. ಕಾಸರಗೋಡು, ಮೂನಾರ್, ಎರ್ನಾಕುಳಂ ಮೊದಲಾದ ಸ್ಥಳಗಳಿಗೆ ಕರೆದೊಯ್ದು ವಸತಿಗೃಹದಲ್ಲಿರಿಸಿ ಮಾನಭಂಗಗೈದಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಯುವತಿಯ ಮೊದಲ ಪತಿ ಮೃತಪಟ್ಟಿದ್ದರು. ಬಳಿಕ ಎರಡನೇ ವಿವಾಹ ನಡೆಸಿದರಾದರೂ ದಾಂಪತ್ಯ ಸಮಸ್ಯೆ ಹಿನ್ನೆಲೆಯಲ್ಲಿ ವಿವಾಹ ವಿಚ್ಛೇಧನ ಪಡೆದಿದ್ದರು. ಅದರ ಬಳಿಕ ಮೂರನೇ ಬಾರಿ ವಿವಾಹ ಆಸಕ್ತಿ ಉಂಟಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಇದು ಗಮನಕ್ಕೆ ಬಂದ ಪ್ರಶಾಂತ್ ಯುವತಿಯನ್ನು ಸಂಪರ್ಕಿಸಿ ವಿವಾಹವಾಗಲು ಆಸಕ್ತಿ ಇದೆ ಎಂದು ತಿಳಿಸಿದ್ದನು. ಬಳಿಕ ಯುವತಿಯನ್ನು ವಿವಿಧ ಕಡೆಗಳಿಗೆ ಕೊಂಡೊಯ್ದು ದೌರ್ಜನ್ಯಗೈದು ಆ ಬಳಿಕ ವಿವಾಹ ಭರವಸೆಯಿಂದ ಹಿಂಜರಿದಿರುವುದಾಗಿ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.