ರಾಜ್ಯದಲ್ಲಿ 182 ಮಂದಿಗೆ ಕೊರೋನಾ ಸೋಂಕು: ಸ್ವ ಪ್ರತಿರೋಧ ಕ್ರಮಕ್ಕೆ ಸಚಿವೆ ನಿರ್ದೇಶ
ತಿರುವಂತಪುರ: ಏಷ್ಯಾ ಖಂಡದ ಕೆಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಅದು ಕೇರಳಕ್ಕೂ ಹರಡತೊಡಗಿದೆ. ಆದ್ದರಿಂದ ಜನರು ಸ್ವಯಂ ಆಗಿ ರೋಗ ಪ್ರತಿರೋಧಕ ಕ್ರಮಗಳನ್ನು ಅನುಸರಿಸಬೇಕೆಂದು ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ.
ರೋಗ ಲಕ್ಷಣವಿರುವವರು ಹಾಗೂ ಆಸ್ಪತ್ರೆಗೆ ಹೋಗುವ ಇತರರು ಮಾಸ್ಕ್ ಧರಿಸಬೇಕು. ಒಮಕ್ರಾನ್ ಜೆಎನ್-1ನ ಹೊಸ ರೂಪಾಂತರವಾದ ಎಲ್ಎಫ್-7 ಮತ್ತು ಎಲ್ಬಿ-1.8 ಇತ್ಯಾದಿ ರೋಗಗಳು ಅತೀ ಶೀಘ್ರದಲ್ಲಿ ಹರಡುತ್ತಿದೆ. ಆದರೆ ಇದು ಕಡಿಮೆ ತೀವ್ರತೆ ಹೊಂದಿದ್ದಾಗಿದೆ. ಹಿರಿಯ ನಾಗರಿಕರು, ಗರ್ಭಿಣಿಯರು, ಗಂಭೀರ ರೋಗ ಅನುಭವಿಸುತ್ತಿರುವವರು ಮನೆಯಿಂದ ಹೊರಗೆ ಹೋಗುವಾಗ, ಸಾರ್ವಜನಿಕ ಪ್ರದೇಶಗಳು ಮತ್ತು ಬಸ್ಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಉತ್ತಮ. ಆದರೆ ಆಸ್ಪತ್ರೆಗೆ ಹೋಗುವ ವೇಳೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅದರಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ನಿರ್ದೇಶವನ್ನು ಸಚಿವೆ ನೀಡಿದ್ದಾರೆ.
ರಾಜ್ಯದಲ್ಲಿ ಈ ತಿಂಗಳು 182 ಮಂದಿಯಲ್ಲಿ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ ಕೋಟ್ಟಯಂ ಜಿಲ್ಲೆಯಲ್ಲಿ 57, ಎರ್ನಾಕುಳಂ 34 ಮತ್ತು ತಿರುವನಂತಪುರಂ ಜಿಲ್ಲೆಯಲ್ಲಿ ಇಂತಹ 30 ಪ್ರಕರಣಗಳು ವರದಿಯಾಗಿದೆ. ಆದ್ದರಿಂದ ರಾಜ್ಯದಲ್ಲಿ ರೋಗ ಲಕ್ಷಣ ಹೊಂದಿರುವವರು ಕೋವಿಡ್ ಪರೀಕ್ಷೆಗೊಳಗಾಗಬೇಕೆಂಬ ಸಲಹೆಯನ್ನು ಸಚಿವೆ ನೀಡಿದ್ದಾರೆ.