ರಾ. ಹೆದ್ದಾರಿಯಲ್ಲಿ ಅಪಾಯಭೀತಿ: ಡ್ರೋನ್ ಪರಿಶೀಲನೆಗೆ ನಿರ್ಧಾರ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣದ ಅಂಗವಾಗಿ ಗುಡ್ಡೆ ಅಗೆದ ಪರಿಣಾಮ ಅಪಾಯ ಭೀತಿ ಎದುರಾದ ಪ್ರದೇಶಗಳಲ್ಲಿ ಡ್ರೋನ್ ಬಳಸಿ ಪರಿಶೀಲನೆ ನಡೆಸಲು ಜಿಲ್ಲಾ ದುರಂತ ನಿವಾರಣಾ ಅಥೋರಿಟಿ ಸಭೆ ನಿರ್ಧರಿಸಿದೆ. ಮಯ್ಯೀಚ, ವೀರ ಮಲಕುನ್ನು, ಮಟ್ಟಲಾಯಿಕುನ್ನು, ಬೇವಿಂಜೆ ಎಂಬೆಡೆಗಳಲ್ಲಿ ಡ್ರೋನ್ ಪರಿಶೀಲನೆ ನಡೆಸಲಾಗುವುದು. ಅಲ್ಲದೆ ಜಿಯೋಲಜಿ, ಮಣ್ಣು ಪರಿಶೀಲನೆ ಇಲಾಖೆಗಳ ನೇತೃತ್ವದಲ್ಲಿ ಸಂಯುಕ್ತ ಸಮೀಕ್ಷೆ ನಡೆಸಲಾಗು ವುದು. ಡ್ರೋನ್ ಮೂಲಕ ಪರಿಶೀಲನೆ ನಡೆಸುವುದರಿಂದ ಗುಡ್ಡೆಯ ಮೇಲ್ಭಾಗ ಬಿರುಕು ಬಿಟ್ಟಿದೆಯೇ ಎಂದು ತಿಳಿಯಲು ಸಾಧ್ಯವಿದೆ. ಹಾಗಿದ್ದಲ್ಲಿ ಅದನ್ನು ತಡೆಯಲು ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯ ಸಾಧ್ಯತೆಯುಳ್ಳ ಪ್ರದೇಶ ಗಳಲ್ಲೂ ಡ್ರೋನ್ ಪರಿಶೀಲನೆ ನಡೆಯಲಿದೆ.
ಜಿಲ್ಲಾಧಿಕಾರಿ ಕೆ. ಇಂಭಶೇಖರ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಡಿಎಂಪಿ ಅಖಿಲ್, ಡೆಪ್ಯುಟಿ ಕಲೆಕ್ಟರ್ (ಎಂಡೋಸಲ್ಫಾನ್ ಸೆಲ್) ಲಿಪು ಎಸ್. ಲಾರೆನ್ಸ್, ಜಿಲ್ಲಾ ಮೆಡಿಕಲ್ ಆಫೀಸರ್ ಡಾ| ಬಿ. ಸಂತೋಷ್, ಜಿಲ್ಲಾ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಬಿ. ರಾಜು ಮೊದಲಾದವರು ಭಾಗವಹಿಸಿದರು.