ವನ್ಯ ಜೀವಿಗಳ ದಾಳಿ : ಜನರ ಜೀವ, ಸೊತ್ತಿಗೆ ಸಂರಕ್ಷಣೆ ಒದಗಿಸಬೇಕು-ಎಂ.ಎಲ್. ಅಶ್ವಿನಿ
ಅಡೂರು: ವನ್ಯ ಜೀವಿಗಳ ಉಪಟಳ ತೀವ್ರಗೊಂಡ ದೇಲಂಪಾಡಿ ಪಂಚಾಯತ್ನ ಜನರ ಜೀವ ಹಾಗೂ ಸೊತ್ತಿಗೆ ಸಂರಕ್ಷಣೆ ಒದಗಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾಯಿಸಿದ್ದಾರೆ. ಬಿಜೆಪಿ ದೇಲಂಪಾಡಿ ಏರಿಯಾ ಸಮಿತಿ ನೇತೃತ್ವದಲ್ಲಿ ಪರಪ್ಪದ ಅರಣ್ಯ ಇಲಾಖೆ ಡಿಪ್ಪೋಗೆ ನಿನ್ನೆ ನಡೆಸಿದ ಮಾರ್ಚ್ ಹಾಗೂ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವನ್ಯ ಜೀವಿಗಳ ದಾಳಿಯಿಂದ ಕೃಷಿನಾಶ ಉಂಟಾದರೆ ಅತ್ಯಲ್ಪ ನಷ್ಟ ಪರಿಹಾರ ನೀಡಲಾಗುತ್ತಿದೆ. ಅದು ಕೂಡಾ ಲಭಿಸಲು ಹಲವು ಕಾಲ ಕಾಯಬೇಕಾಗಿ ಬರುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಅವರು ಒತ್ತಾಯಿಸಿದರು. ವನ್ಯ ಜೀವಿಗಳ ದಾಳಿ ನಡೆಯುವ ಪ್ರದೇಶದಲ್ಲಿ ಸೌರಬೇಲಿ ನಿರ್ಮಿಸಬೇಕು, ದಾರಿದೀಪ ಸ್ಥಾಪಿಸ ಬೇಕು, ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಏರ್ಪಡಿಸಬೇಕೆಂದೂ ಅವರು ಒತ್ತಾಯಿ ಸಿದರು. ಇಲ್ಲಿನ ಶಾಸಕ ಉದುಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವನ್ಯ ಜೀವಿಗಳ ದಾಳಿ ನಡೆಯುವ ಪ್ರದೇಶ ಗಳಿಗೆ ಸಂದರ್ಶಿಸಲು ಸಿದ್ಧವಾಗಬೇಕೆಂದು ಅಶ್ವಿನಿ ಒತ್ತಾಯಿಸಿದರು. ದೇಲಂಪಾಡಿ ಏರಿಯಾ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಅಧ್ಯಕ್ಷತೆ ವಹಿಸಿದರು. ಮುಳಿಯಾರು ಮಂಡಲ ಅಧ್ಯಕ್ಷ ದಿಲೀಪ್ ಪಳ್ಳಂಜಿ, ಚಂದ್ರಶೇಖರ, ಶಿವರಾಮ, ಉದಯ ಮೊದಲಾದವರು ಮಾತನಾಡಿದರು.