ವರ್ಕಾಡಿ ಬಳಿಯ ಯುವಕ ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಸಾವು
ಉಪ್ಪಳ: ವರ್ಕಾಡಿ ಬಳಿಯ ನಿವಾಸಿಯಾದ ಯುವಕ ಕರ್ನಾಟಕದ ಸುಳ್ಯ ಸಮೀಪ ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ವರ್ಕಾಡಿ ಮಜೀರ್ಪಳ್ಳ ಶಾಂತಿನಗರ ನಿವಾಸಿ ಉಮ್ಮರ್ ಎಂಬವರ ಪುತ್ರ ಶಮೀರ್ (೨೬) ಮೃತಪಟ್ಟ ದುರ್ದೈವಿಯಾ ಗಿದ್ದಾರೆ. ಸುಳ್ಯದಲ್ಲಿ ಕನ್ನಡಕ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಮೀರ್ ಅಲ್ಲಿಯೇ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದರು. ನಿನ್ನೆ ಮಧ್ಯಾಹ್ನ ಇವರು ಇಬ್ಬರು ಸ್ನೇಹಿತರ ಜೊತೆ ಸುಳ್ಯ ಬಳಿಯ ಭಸ್ಮಡ್ಕದ ಪಯಸ್ವಿನಿ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದರು. ಶಮೀರ್ ಸ್ನಾನ ಮಾಡುವ ವೇಳೆ ಆಯತಪ್ಪಿ ನೀರಿನಲ್ಲಿ ಮುಳುಗಿ ದ್ದಾರೆನ್ನಲಾಗಿದೆ. ಈ ಬಗ್ಗೆ ಜತೆಗಿದ್ದವರು ಸ್ಥಳೀಯರಿಗೆ ತಿಳಿಸಿದ್ದರು. ಕೂಡಲೇ ಸ್ಥಳೀಯರು ಹಾಗೂ ಅಗ್ನಿಶಾಮಕದಳ ತಲುಪಿ ಹೊಳೆಯಲ್ಲಿ ಶೋಧ ನಡೆಸಿ ಶಮೀರ್ರನ್ನು ಮೇಲಕ್ಕೆತ್ತಿದ್ದು, ಅಷ್ಟರೊಳಗೆ ನಿಧನ ಸಂಭವಿಸಿತ್ತು.
ಮೃತದೇಹವನ್ನು ಮನೆಗೆ ತಲುಪಿಸಿದ ಬಳಿಕ ಧರ್ಮನಗರ ಜುಮಾ ಮಸೀದಿ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮೃತರು ತಂದೆ, ತಾಯಿ ಸುಹರಾ, ಸಹೋದರ ಶಂಸೀರ್, ಸಹೋದರಿ ರಂಸೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.