ವ್ಯಾಪಾರಿ ಮನೆಯಿಂದ ಒಂದು ಕೋಟಿ ರೂ., 300 ಪವನ್ ಚಿನ್ನ ಕಳವುಗೈದ ನೆರೆಮನೆ ನಿವಾಸಿ ಸೆರೆ
ಕಣ್ಣೂರು: ಅಕ್ಕಿ ವ್ಯಾಪಾರಿಯ ಮನೆಯಿಂದ ಒಂದುಕೋಟಿ ರೂಪಾಯಿ ಹಾಗೂ 300 ಪವನ್ ಚಿನ್ನಾಭರಣ ಕಳವು ನಡೆಸಿದ ಪ್ರಕರಣದಲ್ಲಿ ನೆರೆಮನೆ ನಿವಾಸಿ ಸೆರೆಗೀಡಾಗಿದ್ದಾನೆ. ವಳಪಟ್ಟಣಂ ಮನ್ನ ಮುಂಡಚ್ಚಾಲ್ ಹಾಸ್ನ ಸಿ.ಪಿ. ಲಿಜೇಶ್ (45) ಎಂಬಾತನನ್ನು ಎಸಿಪಿ ಟಿ.ಕೆ. ರತ್ನಕುಮಾರ್, ವಳಪಟ್ಟಣಂ ಇನ್ಸ್ಪೆಕ್ಟರ್ ಟಿ.ಪಿ. ಸುಮೇಶ್ ಎಂಬವರ ನೇತೃತ್ವದ ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ. ನವಂಬರ್ 20ರಂದು ರಾತ್ರಿ ಅಕ್ಕಿ ವ್ಯಾಪಾರಿಯಾದ ಮನ್ನಾ ನಿವಾಸಿ ಅಶ್ರಫ್ರ ಮನೆಯಿಂದ ಕಳವು ನಡೆದಿದೆ. ಮನೆಯ ಹಿಂಭಾಗದ ಕಿಟಿಕಿ ಸರಳುಗಳನ್ನು ತೆರವುಗೊಳಿಸಿ ಒಳಗೆ ನುಗ್ಗಿದ ಕಳ್ಳ ಮನೆಯೊಳಗಿದ್ದ ಕೀಲಿ ಕೈ ಉಪಯೋಗಿಸಿ ಕಪಾಟಿ ನಿಂದ ಚಿನ್ನಾಭರಣ ಹಾಗೂ ಹಣವನ್ನು ಕಳವು ನಡೆಸಿದ್ದನು. ಕಳವಿಗೀಡಾದ ನಗನಗದು ಸೆರೆಗೀಡಾದ ಲಿಜೇಶ್ನ ಮನೆಯ ಬೆಡ್ರೂಂನ ಮಂಚದ ಅಡಿಭಾಗದಲ್ಲಿ ಕಬ್ಬಿಣದಿಂದ ನಿರ್ಮಿಸಿದ ಪ್ರತ್ಯೇಕ ಕಪಾಟಿನೊಳಗಿನಿಂದ ಪೊಲೀಸರು ಪತ್ತೆಹಚ್ಚಿದ್ದಾರೆ. ಅಶ್ರಫ್ ಹಾಗೂ ಕುಟುಂಬ ತಮಿಳುನಾಡಿನ ಮಧುರೈಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಭಾಗವಹಿಸಲು ಹೋದ ಸಂದರ್ಭ ದಲ್ಲಿ ಮನೆಯಲ್ಲಿ ಕಳವು ನಡೆದಿತ್ತು. ಎರಡು ದಿನಗಳ ಬಳಿಕ ಮರಳಿ ಬಂದಾಗಲೇ ವಿಷಯ ತಿಳಿದುಬಂದಿತ್ತು. ಅಂತಾರಾಜ್ಯ ಕಳ್ಳರು ಈ ಕಳವು ನಡೆಸಿರಬಹುದೆಂಬ ಸಂಶಯದ ಮೇರೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಆದರೆ ಅಶ್ರಫ್ರ ಮನೆ ಹಾಗೂ ಪರಿಸರದ ಮತ್ತೊಂದು ಮನೆಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಅದರಲ್ಲಿ ಸೆರೆಗೀಡಾದ ದೃಶ್ಯಗಳಲ್ಲಿ ಕಳವು ನಡೆಸಿರುವುದು ಒಬ್ಬನೇ ಆಗಿದ್ದಾನೆಂಬ ಸೂಚನೆ ಲಭಿಸಿತ್ತು. ಇದರಂತೆ ಆ ಪರಿಸರದ 200ರಷ್ಟು ಮಂದಿಯನ್ನು ಕಸ್ಟಡಿಗೆ ತೆಗೆದು ತನಿಖೆ ಗೊಳಪಡಿಸಲಾಗಿತ್ತು. ಈ ಪೈಕಿ ಲಿಜೇಶ್ ಕೂಡಾ ಇದ್ದನು. ಈ ಮಧ್ಯೆ ಈತನ ಸ್ನೇಹಿತರಿಂದ ಲಭಿಸಿದ ಹೇಳಿಕೆ ಪೊಲೀಸರಿಗೆ ನಿರ್ಣಾಯಕವಾಯಿತು. ಕಳವು ನಡೆಯುವುದರ ಕೆಲವು ದಿನಗಳ ಹಿಂದೆ ಲಿಜೇಶ್ ಒಂದು ಮುಖವಾಡ ಖರೀದಿಸಿದ್ದನೆಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಲಿಜೇಶ್ನನ್ನು ಕಸ್ಟಡಿಗೆ ತೆಗೆದು ಸಮಗ್ರವಾಗಿ ತನಿಖೆಗೊಳಪಡಿಸಿದಾಗ ಕಳವು ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಲಿಜೇಶ್ನ ಮನೆಯಲ್ಲಿ ನಡೆಸಿದ ಪರಿಶೀಲನೆ ವೇಳೆ ಕಳವಿಗೀ ಡಾದ ನಗ-ನಗದು ಪತ್ತೆಯಾಗಿದೆ. ಒಂದು ವರ್ಷ ಹಿಂದೆ ಕೀಚೇರಿ ಎಂಬಲ್ಲಿನ ಮನೆಯಿಂದ 11.5 ಪವನ್ ಚಿನ್ನ ಹಾಗೂ ನಾಲ್ಕೂವರೆ ಲಕ್ಷ ರೂಪಾಯಿ ಕಳವಿಗೀಡಾಗಿತ್ತು. ಈ ಕಳವು ಕೂಡಾ ನಡೆಸಿರುವುದು ತಾನಾಗಿದ್ದೇನೆಂದು ಲಿಜೇಶ್ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.