ಶಬರಿಮಲೆಯ ಭದ್ರತಾ ಹೊಣೆಗಾರಿಕೆ ಕಾಸರಗೋಡು ಹೆಚ್ಚುವರಿ ಎಸ್‌ಪಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ

ಕಾಸರಗೋಡು: ಶಬರಿಮಲೆ ಯಲ್ಲಿ ಮಂಡಲ ಪೂಜೆ ಮತ್ತು ಮಕರಜ್ಯೋತಿ ತೀರ್ಥಾಟನಾ ಋತು ವೇಳೆ ಸನ್ನಿಧಾನದ ಭದ್ರತಾ ಹೊಣೆಗಾರಿಕೆಯನ್ನು ಕಾಸರಗೋಡು ಹೆಚ್ಚುವರಿ ಎಸ್‌ಪಿ ಪಿ. ಬಾಲಕೃಷ್ಣನ್ ನಾಯರ್ ಸೇರಿದಂತೆ ಒಟ್ಟು ಆರು ಹೆಚ್ಚುವರಿ ಎಸ್‌ಪಿಗಳಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಡಾ. ಶಾಬ್ ದರ್ವೇಷ್ ಸಾಹಿಬ್ ವಹಿಸಿಕೊಟ್ಟಿದ್ದಾರೆ. ಇದರಂತೆ ಬಾಲಕೃಷ್ಣನ್ ನಾಯರ್‌ರಿಗೆ ನ.೧೪ರಿಂದ ೨೫ರ ತನಕ ಸನ್ನಿಧಾನದ ಭದ್ರತಾ ಹೊಣೆಗಾರಿಕೆ ವಹಿಸಿಕೊಡಲಾಗಿದೆ. ಇವರ ಹೊರತಾಗಿ ಕಾಸರಗೋಡಿ ನಲ್ಲಿ ಈ ಹಿಂದೆ ಡಿವೈಎಸ್‌ಪಿ ಯಾಗಿದ್ದು ನಂತರ ಹೆಚ್ಚುವರಿ ಎಸ್.ಪಿಯಾಗಿ ಉದ್ಯೋಗದಲ್ಲಿ  ಭಡ್ತಿ ಹೊಂದಿದ್ದ ಕೆ.ವಿ. ವೇಣುಗೋಪಾಲನ್ ಮತ್ತು ಇತರ ಹೆಚ್ಚುವರಿ ಎಸ್‌ಪಿಗಳಾದ ಪಿ.ಸಿ. ಹರಿದಾಸನ್, ಟಿ.ಎಸ್. ಸಜೀವ್, ಎಂ.ಆರ್. ಸತೀಶ್ ಕುಮಾರ್ ಮತ್ತು ಎಂ.ಪಿ. ವಿನೋದ್‌ರನ್ನು ಶಬರಿಮಲೆ ಸನ್ನಿಧಾನದಲ್ಲಿ ವಿಶೇಷ ಪೊಲೀಸ್ ಭದ್ರತೆಯ ಹೊಣೆಗಾರಿಕೆ ವಹಿಸಿಕೊಡಲಾಗಿದೆ. ಇವರು ಶಿಫ್ಟ್ ಗಳಾಗಿ ಇಲ್ಲಿ ಸೇವೆ ಸಲ್ಲಿಸಲಿದ್ದಾರೆ.

ಶಬರಿಮಲೆ ತೀರ್ಥಾಟನಾ ಋತು ನವೆಂಬರ್ 14ರಂದು ಆರಂಭ ಗೊಂಡು ಜನವರಿ 20ರ ತನಕ ಮುಂದುವರಿಯಲಿದ್ದು, ಈ ಅವಧಿಯಲ್ಲಿ ಸನ್ನಿಧಾನ, ಪಂಪಾ, ನಿಲೈಕಲ್ ಎಂಬೆಡೆಗಳಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳನ್ನೇ ಸ್ಪೆಷಲ್ ಅಧಿಕಾರಿಗಳನ್ನಾಗಿ ಭದ್ರತೆಗಾಗಿ ನಿಯೋಜಿಸಲಾಗುವುದು.

ಸನ್ನಿಧಾನದ ಹೊರತಾಗಿ ಪಂಪಾ ಮತ್ತು ನಿಲೈಕಲ್‌ನಲ್ಲೂ ವಿಶೇಷ ಭದ್ರತೆ ಏರ್ಪಡಿಸಲಾಗುವುದು. ಈ ಶಬರಿಮಲೆಯ ತೀರ್ಥಾಟನಾ ಋತು ವೇಳೆ ಈ ಹಿಂದಿನ ವರ್ಷಗಳಲ್ಲಿ ಹಲವು ಬಾರಿ ತೀವ್ರ ಭದ್ರತಾ ಲೋಪ ಉಂಟಾಗಿದ್ದು, ಅದರಿಂದ ತೀರ್ಥಾಟಕರು ಭಾರೀ ಸಂಕಷ್ಟ ಎದುರಿಸಬೇಕಾಗಿ ಬಂದಿತ್ತು. ಇದನ್ನೆಲ್ಲಾ ಪರಿಗಣಿಸಿ ಈ ತೀರ್ಥಾಟನಾ ಋತುವಿನಲ್ಲಿ ಅಂತಹ ಯಾವುದೇ ಲೋಪ ದೋಷಗಳು ಉಂಟಾಗದೇ ಇರುವ ಉದ್ದೇಶ ದಿಂದ ಭದ್ರತೆಯ ಹೊಣೆಗಾರಿಕೆ ಯನ್ನು ಉನ್ನತ ಪೊಲೀಸ್ ಅಧಿಕಾರಿ ಗಳಿಗೇ ಡಿಜಿಪಿ ವಹಿಸಿಕೊಟ್ಟಿದ್ದಾರೆ.

ಇನ್ನೊಂದೆಡೆ ಶಬರಿಮಲೆಯ  ತುಲಾಮಾಸ ಪೂಜೆ ಸಮಯದಲ್ಲಿ ಶ್ರೀ ಕ್ಷೇತ್ರಕ್ಕೆ ಕಾಣಿಕೆ ರೂಪದಲ್ಲಿ 5,31,89,890 ರೂ. ಲಭಿಸಿದೆ. ಇದು ತುಲಾ ಮಾಸ ಪೂಜಾ ಸಮಯದಲ್ಲಿ  ಲಭಿಸಿದ ಅತೀ ಹೆಚ್ಚು ಕಾಣಿಕೆಯಾಗಿದೆ. ತುಲಾ ಮಾಸ ಪೂಜಾ ಸಮಯದಲ್ಲಿ ಈ ಹಿಂದಿನ ವರ್ಷಕ್ಕಿಂತಲೂ ಇಮ್ಮಡಿ ತೀರ್ಥಾಟಕರು ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ್ದಾರೆ. ಅಂದರೆ ಎರಡೂವರೆ ಲಕ್ಷ ತೀರ್ಥಾಟಕರು ಈ ಅವಧಿಯಲ್ಲಿ ಶಬರಿಮಲೆ ದರ್ಶನ ನಡೆಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page