ಶಬರಿಮಲೆ: ಎಲ್ಲಾ ತೀರ್ಥಾಟಕರಿಗೂ ವಿಮಾ ಸಂರಕ್ಷಣೆ
ಶಬರಿಮಲೆ: ಶಬರಿಮಲೆ ತೀರ್ಥಾಟನೆಗೆ ಆಗಮಿಸುವ ಎಲ್ಲಾ ತೀರ್ಥಾಟಕರಿಗೂ ವಿಮೆ ಸಂರಕ್ಷಣೆ ಒದಗಿಸಲು ತಿರುವಿದಾಂಕೂರ್ ಮುಜರಾಯಿ ಮಂಡಳಿ ತೀರ್ಮಾನಿಸಿದೆ. ಈ ತನಕ ಶಬರಿಮಲೆ ತೀರ್ಥಾಟನೆಗೆ ಆಗಮಿಸುವ ತೀರ್ಥಾಟಕರು ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಪಘಾತಕ್ಕೊಳಗಾದರೆ ಅವರಿಗೆ ಅಥವಾ ಅವರ ಆಶ್ರಿತರಿಗೆ ವಿಮೆ ಸಂರಕ್ಷಣೆ ಲಭಿಸುತ್ತಿತ್ತು.
ಈ ವಿಮಾ ಸಂರಕ್ಷಣೆಯನ್ನು ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ತೀರ್ಮಾನ ಮಂಡಳಿ ಈಗ ಕೈಗೊಂಡಿದೆ. ಇದರಂತೆ ಶಬರಿಮಲೆ ತೀರ್ಥಾಟನೆಗಾಗಿ ಆಗಮಿಸುವ ಭಕ್ತರು ರಾಜ್ಯದ ಅದ್ಯಾವುದೇ ಜಿಲ್ಲೆಯಲ್ಲಿ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದರೆ ಅವರ ಆಶ್ರಿತರಿಗೆ ಐದು ಲಕ್ಷ ರೂ. ಲಭಿಸಲಿದೆ. ಈ ತನಕ ಪತ್ತನಂತಿಟ್ಟ, ಆಲಪ್ಪುಳ, ಇಡುಕ್ಕಿ ಮತ್ತು ಕೋಟಯಂ ಜಿಲ್ಲೆಗಳು ಮಾತ್ರವೇ ಈ ವಿಮೆಯ ವ್ಯಾಪ್ತಿಗೊಳಪಡಿಸಲಾಗಿತ್ತು. ಅದನ್ನು ಈಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ.
ಅಸೌಖ್ಯದಿಂದ ಸಾವನ್ನಪ್ಪುವ ತೀರ್ಥಾಟಕರ ಆಶ್ರಿತರಿಗೂ ಇನ್ನು ಮೂರು ಲಕ್ಷ ರೂ. ವಿಮೆ ಲಭಿಸಲಿದೆ. ಈ ತನಕ ಇಂತಹ ಸವಲತ್ತುಗಳು ಇದ್ದಿರಲಿಲ್ಲ. ಇದಕ್ಕಾಗಿ ಪ್ರತ್ಯೇಕ ನಿಧಿಗೆ ರೂಪು ನೀಡುವ ತೀರ್ಮಾನವನ್ನು ಮಂಡಳಿ ಕೈಗೊಂಡಿದೆ. ಇದರಂತೆ ಶಬರಿಮಲೆ ದರ್ಶನಕ್ಕಾಗಿ ವರ್ಚುವಲ್ ಬುಕ್ಕಿಂಗ್ ನಡೆಸುವ ಮತ್ತು ಸ್ಪೋಟ್ ಬುಕ್ಕಿಂಗ್ ನಡೆಸುವ ಭಕ್ತರಿಂದ ಅವರ ಸ್ವ-ಇಚ್ಚೆ ಪ್ರಕಾರ ಅವರಿಂದ ತಲಾ ಐದು ರೂ. ಪಡೆಯಲಾಗುದು. ಆಸಕ್ತಿ ಹೊಂದಿದವರಿಂದ ಮಾತ್ರವೇ ಇದನ್ನು ಸ್ವೀಕರಿಸಲಾಗುವುದು. ಇದರ ಹೊರತಾಗಿ ಇದಕ್ಕಾಗಿ ಆರ್ಥಿಕ ನೆರವು ನೀಡಲು ಮುಂದಾಗುವವರಿಂದಲೂ ದೇಣಿಗೆ ರೂಪದಲ್ಲಿ ಈ ವಿಶೇಷ ನಿಧಿಗೆ ಹಣ ಸಂಗ್ರಹಿಸಲು ಮಂಡಳಿ ತೀರ್ಮಾನಿಸಿದೆ.