ಸಾಮಾಜಿಕ ಮಾಧ್ಯಮದಲ್ಲಿ ಮತೀಯ ಸಾಮರಸ್ಯಕ್ಕೆ ಭಂಗ ಉಂಟುಮಾಡುವ ರೀತಿಯ ಸಂದೇಶ ರವಾನಿಸಿದ ಆರೋಪಿ ಸೆರೆ
ಕಾಸರಗೋಡು: ವಾಟ್ಸಪ್ ಗ್ರೂಪ್ನಲ್ಲಿ ಮತೀಯ ಸಾಮರಸ್ಯಕ್ಕೆ ಭಂಗ ಉಂಟುಮಾಡುವ ರೀತಿಯಲ್ಲಿ ಸಂದೇಶ ರವಾನಿಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಸೈಬರ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಮಂಜೇಶ್ವರ ಕುಂಜತ್ತೂರು ನಿವಾಸಿ ಹಾಗೂ ಈಗ ಚೌಕಿ ಕಾರೋಟ್ ಶಾಲೆ ಬಳಿ ವಾಸಿಸುತ್ತಿರುವ ಅಬ್ದುಲ್ ಲತೀಫ್ (47) ಎಂಬಾತ ಬಂಧಿತ ಆರೋಪಿ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಉಸ್ತುವಾರಿ ಹೊಣೆಗಾರಿಕೆ ಹೊಂದಿರುವ ಇನ್ಸ್ಪೆಕ್ಟರ್ ನಳಿನಾಕ್ಷನ್ ಪಿ.ಯವರ ನೇತೃತ್ವದಲ್ಲಿ ಎಸ್ಐ ಶ್ರೀದಾಸ್ ಎಂ.ವಿ, ಪ್ರೇಮರಾಜನ್ ಎ.ವಿ. ಮತ್ತು ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ಗಳಾದ ದಿಲೀಶ್ ಎಂ. ಹಾಗೂ ಸವಾದ್ ಅಶ್ರಫ್ ಎಂಬವರನ್ನೊಳಗೊಂಡ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ. ನಂತರ ಈತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮತೀಯ ಸಾಮರಸ್ಯ ಹದಗೆಡಿಸುವ ರೀತಿಯ ಸಂದೇಶಗಳನ್ನು ರವಾನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.