ಸಿಡಿಲಿನ ಆಘಾತ: 25 ದಿನ ಹಿಂದೆ ಶಸ್ತ್ರಚಿಕಿತ್ಸೆ ನಡೆದ ಮಗು ಮೃತ್ಯು
ಕಾಸರಗೋಡು: ಸಿಡಿಲಿನ ಆಘಾತದಿಂದಾಗಿ 25 ದಿನಗಳ ಹಿಂದೆ ಹೃದಯಶಸ್ತ್ರಚಿಕಿತ್ಸೆಗೊಳಗಾದ ಮಗು ಮೃತಪಟ್ಟ ಘಟನೆ ನಡೆದಿದೆ. ನೇಪಾಳ ನಿವಾಸಿ ಸಂಜೀವ್ ಭೇರ ಎಂಬವರ ಒಂದು ವರ್ಷ ೮ ತಿಂಗಳ ಪ್ರಾಯದ ಪುತ್ರಿ ಅಸ್ಮಿತ ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ ಘಟನೆ ನಡೆದಿದೆ. ಭಾರೀ ಸಿಡಿಲಿನ ಆಘಾತದಿಂದಾಗಿ ಮಗು ಪ್ರಜ್ಞೆ ಕಳೆದುಕೊಂಡಿದ್ದಳೆನ್ನಲಾಗಿದೆ. ಕೂಡಲೇ ವೈದ್ಯರ ಬಳಿಗೆ ಕರೆದೊಯ್ಯಲಾಗಿತ್ತು. ಆದರೆ ಸ್ಥಿತಿ ಗಂಭೀರವಾಗಿದೆಯೆಂದು ತಿಳಿಸಿದ್ದು, ಇದರಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಜನ್ಮತಾಃ ಹೃದಯಸಂಬಂಧ ಅಸೌಖ್ಯವಿದ್ದ ಅಸ್ಮಿತಾಳನ್ನು ನಾಗರಿಕರ ಸಹಾಯದಿಂದ ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಮಗುವನ್ನು ಮರಳಿ ಆರೋಗ್ಯವಂತಳಾಗಿಸ ಬಹುದೆಂಬ ನಿರೀಕ್ಷೆಯಲ್ಲಿದ್ದಾಗಲೇ ದಿಢೀರ್ ಸಾವು ಸಂಭವಿಸಿದೆ.
ನೇಪಾಲ ನಿವಾಸಿಗಳಾದ ಸಂಜೀವ್ ಬೇರ ಹಾಗೂ ಪತ್ನಿ ಪನೇರ ಬೇರ ಚೀಮೇನಿ ಮುತ್ತುಪಾರಪಳ್ಳಿ ಎಂಬಲ್ಲಿಗೆ ಸಮೀಪದಲ್ಲಿರುವ ಫಾರ್ಮ್ನ ಕಾರ್ಮಿಕರಾಗಿದ್ದಾರೆ. ಫಾರ್ಮ್ ಬಳಿಯ ಕ್ವಾರ್ಟರ್ಸ್ನಲ್ಲಿ ಇವರು ವಾಸಿಸುತ್ತಿದ್ದರು.