ಸೈಕಲ್ ಚೈನ್ ಕಾಲಿಗೆ ಸಿಲುಕಿ ಒದ್ದಾಡುತ್ತಿದ್ದ ಬಾಲಕನನ್ನು ರಕ್ಷಿಸಿದ ಅಗ್ನಿಶಾಮಕದಳ
ಕಾಸರಗೋಡು: ಸೈಕಲ್ ಚಲಾಯಿಸುವ ವೇಳೆ ಅದರ ಚೈನ್ ಕಾಲಿಗೆ ಸಿಲುಕಿ ನೋವಿನಿಂದ ಒದ್ದಾಡುತ್ತಿದ್ದ ಬಾಲಕನನ್ನು ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ತಳಂಗರೆಯಲ್ಲಿ ನಡೆದಿದೆ. ತಳಂಗರೆ ಜದೀದ್ ರಸ್ತೆಯ ಅಬ್ದುಲ್ ಸಲೀಂ ಎಂಬವರ ಪುತ್ರ ಹತೀಮ್ (6) ನಿನ್ನೆ ಮಧ್ಯಾಹ್ನ ಮನೆ ಬಳಿ ಸೈಕಲ್ ಚಲಾಯಿಸುತ್ತಿದ್ದ ವೇಳೆ ಬಿದ್ದಿದ್ದು, ಈ ವೇಳೆ ಸೈಕಲ್ನ ಚೈನ್ ಆತನ ಕಾಲಿಗೆ ಸಿಲುಕಿಕೊಂಡಿದೆ. ತಕ್ಷಣ ಮನೆಯವರು ಮತ್ತು ಇತರರು ರಕ್ಷಾಕಾರ್ಯಾಚರಣೆ ನಡೆಸಿದರೂ ಸಫಲವಾಗದಾಗ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣು ಗೋಪಾಲನ್ರ ನೇತೃತ್ವದ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಚೈನ್ ತುಂಡರಿಸುವ ಮೂಲಕ ಬಾಲಕನನ್ನು ರಕ್ಷಿಸಿದರು. ಬಳಿಕ ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.
ಈ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳಾದ ಎಂ. ರಮೇಶನ್, ಪಿ.ಟಿ. ರಾಜೇಶ್, ಅಮಲ್ರಾಜ್, ಕೆ.ವಿ ಜಿತಿನ್ ಕೃಷ್ಣನ್, ಎಂ.ವಿ. ವೈಶಾಖ್ ಮತ್ತು ಹೋಮ್ಗಾರ್ಡ್ ಪಿ. ರಾಜು ಒಳಗೊಂಡಿದ್ದರು.