ಸ್ಕೂಟರಿಗೆ ಕಾರು ಢಿಕ್ಕಿ ಹೊಡೆಸಿ ಇಬ್ಬರು ಗಾಯಗೊಂಡ ಘಟನೆ: ಕೊಲೆಯತ್ನ ಪ್ರಕರಣ ದಾಖಲು

ಕಾಸರಗೋಡು: ಅಕ್ಟೋಬರ್ ೪ರಂದು ರಾತ್ರಿ ಕೂಡ್ಲಿನಲ್ಲಿ ಸ್ಕೂಟರ್‌ಗೆ ಇನ್ನೋವಾ ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರರಾದ ಇಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿ ಕಾರು ಚಲಾಯಿಸಿದ ವ್ಯಕ್ತಿ ವಿರುದ್ಧ ಕಾಸರಗೋಡು ಪೊಲೀಸರು ಸೆಕ್ಷನ್ ೩೦೭ರ ಪ್ರಕಾರ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೂಡ್ಲು ಮೀಪುಗುರಿ ನಿವಾಸಿ  ಅಹಮ್ಮದ್ ಜಾಬೀರ್ ಎನ್.ಆರ್ ಎಂಬಾತ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾನು ಸ್ನೇಹಿತ ಜಾಬೀರ್ ನೊಂದಿಗೆ  ಸ್ಕೂಟರ್‌ನಲ್ಲಿ ಮೀಪುಗಿರಿಯಿಂದ ಸೂರ್ಲಿಗೆ ಬರುವ ದಾರಿ ಮಧ್ಯೆ  ಉಳಿಯತ್ತಡ್ಕ ಕಡೆಯಿಂದ ಬರುತ್ತಿದ್ದ ಕಾರು ತನ್ನ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತೆಂದೂ ಅದರಿಂದ ರಸ್ತೆಗೆ ಬಿದ್ದ ತನ್ನ ದೇಹದ ಮೇಲೆ  ಕಾರು  ಹರಿಸಿ ಕೊಲೆಗೈಯ್ಯುವ ಯತ್ನ ನಡೆಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಗಾಯಾಳು ಅಹಮ್ಮದ್ ಜಾಬೀರ್ ಆರೋಪಿಸಿದ್ದಾನೆ.  ಈ ಅಪಘಾತದಲ್ಲಿ  ಅಹಮ್ಮದ್ ಜಾಬೀರ್‌ನ ಸ್ನೇಹಿತ ಸೂರ್ಲಿನ ಜಾಬೀರ್ ಎಂಬಾತನೂ ಗಾಯಗೊಂಡಿದ್ದು ಅವರಿಬ್ಬರು  ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

You cannot copy contents of this page