ಸ್ನೇಹ ಸಂಬಂಧದಿಂದ ಹಿಂಜರಿದ ಯುವತಿಗೆ ಯುವಕನಿಂದ ಇರಿತ: ಮನನೊಂದು ವಿಷ ಸೇವಿಸಿದ ಯುವತಿ
ಹೊಸದುರ್ಗ: ಸ್ನೇಹ ಸಂಬಂಧದಿಂದ ಹಿಂಜರಿದ ದ್ವೇಷದಿಂದ ಬಾಡಿಗೆ ಮನೆಗೆ ಅತಿಕ್ರಮಿಸಿ ನುಗ್ಗಿ ಯುವತಿಗೆ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ಇದೇ ವೇಳೆ ಹಲ್ಲೆಯಿಂದ ಮನನೊಂದು ಯುವತಿ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನೀಲೇಶ್ವರ ಬಳಿಯ ತೈಕಡಪ್ಪುರದ ಮರಕ್ಕಾತ್ ಕಡಪ್ಪುರ ನಿವಾಸಿಯೂ ಕಣ್ಣೂರು ಎಡಕ್ಕಾಡ್ ಕಾಟುಕಚ್ಚೇರಿ ಎಂಬಲ್ಲಿ ವಾಸಿಸುವ ೩೦ರ ಹರೆಯದ ಯುವತಿ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಕಣ್ಣೂರು ಸಿಟಿ ಪೊಲೀಸರು ಕಕ್ಕಾಡ್ ನಿವಾಸಿಯಾದ ವಿನೀತ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂ ಡಿದ್ದಾರೆ. ಘಟನೆ ಬಗ್ಗೆ ಪೊಲೀಸರು ಈ ರೀತಿ ತಿಳಿಸಿದ್ದಾರೆ: ದೂರುದಾತೆ ಯಾದ ಯುವತಿ, ಪುತ್ರ ಹಾಗೂ ತಾಯಿಯೊಂದಿಗೆ ಕಾಞಿರ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಹಿಂದೆ ಇನ್ಸ್ಟಾಗ್ರಾಂ ಮೂಲಕ ಪರಿಚಯಗೊಂಡ ವಿನೀತ್ನೊಂದಿಗೆ ಯುವತಿಸ್ನೇಹ ಬೆಳೆಸಿದ್ದಳು. ಬಳಿಕ ಸ್ನೇಹದಿಂದ ಆಕೆ ಹಿಂಜರಿದಿದ್ದಾಳೆ. ಈ ದ್ವೇಷದಿಂದ ಮೊನ್ನೆ ಸಂಜೆ ಕತ್ತಿ ಸಹಿತ ಯುವತಿಯ ಮನೆಗೆ ನುಗ್ಗಿದ ವಿನೀತ್ ಯುವತಿಗೆ ಇರಿಯಲು ಯತ್ನಿಸಿದ್ದಾನೆ.
ತಡೆಯಲೆತ್ನಿಸಿದಾಗ ಕತ್ತಿ ಹಣೆಗೆ ತಾಗಿ ಗಾಯವುಂಟಾಗಿದೆ. ಅಲ್ಲದೆ ಟಿವಿ ಸಹಿತ ಗೃಹೋಪಕರಣಗಳನ್ನು ಆರೋಪಿ ಹಾನಿಗೊಳಿಸಿದ್ದಾನೆ. ಆರೋಪಿ ಜೀವಿಸಲು ಬಿಡುವುದಿಲ್ಲ ವೆಂದು ತಿಳಿಸಿ ಯುವತಿ ಇಲಿ ವಿಷ ಸೇವಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿರುವ ಯುವತಿಯನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.