ಹಲ್ಲೆ ಪ್ರಕರಣ: ತಲೆಮರೆಸಿದ್ದ ಆರೋಪಿ ಸೆರೆ
ಕುಂಬಳೆ: ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂ ಡಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಅತೀ ಸಾಹಸದಿಂದ ಸೆರೆಹಿಡಿದಿದ್ದಾರೆ.
ಬಂದ್ಯೋಡು ನಿವಾಸಿ ಜಲೀಲ್ (35) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. 2019ರಲ್ಲಿ ಈತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಮಹಿಳೆಗೆ ಹಲ್ಲೆಗೈದ ಹಾಗೂ ಹೊಡೆದಾಟ ಪ್ರಕರಣದಲ್ಲಿ ಈತ ಆರೋಪಿ ಯಾಗಿದ್ದನು. ಆದರೆ ಇದುವರೆಗೆ ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ. ನಿನ್ನೆರಾತ್ರಿ ಈತ ಬಂದ್ಯೋಡಿನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ಕುಂಬಳೆ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಪ್ರೊಬೆಶನರಿ ಎಸ್ಐ ಅನಂತಕೃಷ್ಣನ್ ನೇತೃತ್ವದಲ್ಲಿ ಪೊಲೀಸರು ಜಲೀಲ್ನನ್ನು ಸೆರೆಹಿಡಿಯಲು ಯತ್ನಿಸಿದಾಗ ಸಮೀಪದ ಕಾಂಪೌಂಡ್ ಹಾರಿ ಪರಾರಿಯಾಗಲೆತ್ನಿಸಿದ್ದಾನೆ. ಕೂಡಲೇ ಈತನನ್ನು ಬೆನ್ನಟ್ಟಿ ಸೆರೆಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.