ಹಿತ್ತಿಲಿಗೆ ಬೆಂಕಿ: ತಪ್ಪಿದ ಭಾರೀ ದುರಂತ
ಬದಿಯಡ್ಕ: ಬದಿಯಡ್ಕ ಸಮೀಪದ ನಾರಂಪಾಡಿ ಕಾರಮೂಲೆಯಲ್ಲಿ ಕೆ.ಎಂ. ಇಬ್ರಾಹಿಂ ಮತ್ತು ಬೀಫಾತುಮ್ಮ ಎಂಬವರ ಮಾಲಕತ್ವದಲ್ಲಿರುವ ಸುಮಾರು ನಾಲ್ಕು ಎಕ್ರೆ ಹಿತ್ತಿಲಿಗೆ ನಿನ್ನೆ ಬೆಂಕಿ ತಗಲಿ ಸಂಭಾವ್ಯ ಭಾರೀ ದೊಡ್ಡ ದುರಂತ ಅದೃಷ್ಟವಶಾತ್ ತಪ್ಪಿಹೋಗಿದೆ.
ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ತಾಸುಗಳ ತನಕ ನಡೆಸಿದ ಸತತ ಪ್ರಯತ್ನದಿಂದಾಗಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು. ಈ ಹಿತ್ತಿಲಲ್ಲಿದ್ದ ಮರಗಳಲ್ಲಿ ಹೆಚ್ಚಿನವು ಬೆಂಕಿಗಾಹುತಿಯಾಗಿದ್ದು, ಎರಡು ವರ್ಷದ ಹಿಂದೆ ಈ ಹಿತ್ತಿಲಲ್ಲಿ ನೆಟ್ಟು ಬೆಳೆಸಿದ್ದ ನೂರಾರು ಮಹಾಗಣಿ, ಗೇರು ಸಸಿಗಳು ಬೆಂಕಿಗಾಹುತಿಯಾಗಿವೆ. ಇದರಿಂದ ಭಾರೀ ನಷ್ಟ ಅಂದಾಜಿಸಲಾ ಗಿದೆ. ಆದರೆ ಹಿತ್ತಿಲಿಗೆ ಬೆಂಕಿ ತಗಲಿಕೊಂಡಿರುವ ಕಾರಣ ಇನ್ನೂ ಸ್ಪಷ್ಟಗೊಂಡಿಲ್ಲ. ಯಾರೋ ಕಿಡಿಗೇಡಿಗಳು ಹಿತ್ತಿಲಿಗೆ ಕಿಚ್ಚಿರಿಸಿರಬಹುದೆಂಬ ಶಂಕೆಯನ್ನು ಹಿತ್ತಿಲ ಮಾಲಕರು ವ್ಯಕ್ತಪಡಿಸಿದ್ದಾರೆ.
ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಎಕ್ರೆಗಟ್ಟಲೆ ಹಿತ್ತಿಲಿಗೆ ಬೆಂಕಿ ತಗಲಿತ್ತು. ಇಲ್ಲಿ ಕೋಳಿ ಫಾರ್ಮ್ ಕಾರ್ಯವೆಸಗುತ್ತಿದ್ದು ಅದೃಷ್ಟವಶಾತ್ ಅದಕ್ಕೆ ಯಾವುದೇ ರೀತಿಯ ಹಾನಿಯುಂಟಾಗಿಲ್ಲ.