ಹೊಸಂಗಡಿ ರೈಲ್ವೇ ಗೇಟ್ ಪರಿಸರದಲ್ಲಿ ತುಂಬಿಕೊಂಡ ಮಳೆ ನೀರು: ಪಾದಚಾರಿಗಳಿಗೆ ನೀರಿನ ಅಭಿಷೇಕ
ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್ ಬಳಿಯಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಈ ದಾರಿಯಾಗಿ ತೆರಳುವ ಪಾದಚಾರಿಗಳ ಸಹಿತ ದ್ವಿಚಕ್ರ ವಾಹನ ಸವಾರರಿಗೆ ಕೆಸರು ನೀರಿನ ಅಭಿಷೇಕ ಉಂಟಾಗುತ್ತಿದೆ. ಗೇಟ್ ಪರಿಸರದಲ್ಲಿ ಕಳೆದ ವರ್ಷ ಇಂಟರ್ ಲಾಕ್ಅಳವಡಿಸಿ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಆದರೆ ಈ ಕಾಮಗಾರಿಯ ಅವ್ಯವಸ್ಥೆಯೇ ಮಳೆ ನೀರು ಕಟ್ಟಿ ನಿಲ್ಲಲು ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮಳೆ ನೀರು ಹರಿಯಲು ವ್ಯವಸ್ಥೆ ಇಲ್ಲದೆ ಸಂಗ್ರಹಗೊಂಡಿರುವುದರಿಂದ ಸಮಸ್ಯೆಯಾಗಿದೆ. ಹೊಸಂಗಡಿ ಪೇಟೆಯಿಂದ ಗೇಟ್ ದಾಟಿ ಬಂಗ್ರಮಂಜೇಶ್ವರ ರಸ್ತೆಗೆ ಅದೇ ರೀತಿ ವಿರುದ್ಧ ದಿಕ್ಕಿಗೂ ದಿನನಿತ್ಯ ಸಾವಿರಾರು ವಾಹನಗಳು ಸಂಚರಿ ಸುತ್ತಿವೆ. ಈ ವೇಳೆ ಪಾದಚಾರಿಗಳಿಗೆ ಹಾಗೂ ಹೆಚ್ಚಾಗಿ ದ್ವಿಚಕ್ರ ಸವಾರರಿಗೆ ಕೆಸರು ನೀರು ಎರಚುತ್ತಿದೆ. ಕಳೆದ ವರ್ಷ ಮಳೆಗಾಲದಲ್ಲೂ ಇದೇ ಸಮಸ್ಯೆ ಯಾಗಿತ್ತು. ಈಬಗ್ಗೆ ಸಾರ್ವ ಜನಿಕರು ಗೇಟ್ ನಲ್ಲಿರುವ ರೈಲ್ವೇ ಉದ್ಯೋಗಸ್ಥರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಉಂಟಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.