ಹಜ್‌ಗೆ ತೆರಳಿದ ನಿವೃತ್ತ  ಅಧ್ಯಾಪಕ ಸೌದಿಯಲ್ಲಿ ನಿಧನ

ಬದಿಯಡ್ಕ: ಹಜ್‌ಗೆ ತೆರಳಿದ ನಿವೃತ್ತ ಅಧ್ಯಾಪಕ ಸೌದಿಯಲ್ಲಿ ಮೃತಪಟ್ಟರು. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಗುಣಾಜೆ ಮುಂಡ್ಯತ್ತಡ್ಕ ನಿವಾಸಿ ಬಾಪುಂಞಿ (77) ಎಂಬವರು ಮೃತಪಟ್ಟ ವ್ಯಕ್ತಿ. ಗುರುವಾರದಂದು ಹರಂಶರೀಫ್ ಬಳಿ ಘಟನೆ ಸಂಭವಿಸಿದೆ. ಮೃತರ ಅಂತ್ಯ ಸಂಸ್ಕಾರ ಮದೀನದಲ್ಲಿ ನೆರವೇರಿಸಲಾಯಿತು.

ಈ ತಿಂಗಳ 6ರಂದು ಪತ್ನಿ ಆಯಿಶಾ, ಸಹೋದರಿ ಮರಿಯಮ್ಮ ಎಂಬಿವರೊಂದಿಗೆ ಬಾಪುಂಞಿ ಹಜ್‌ಗೆ ತೆರಳಿದ್ದರು. ಗುಣಾಜೆ ವಾರ್ಡ್ ಲೀಗ್ ಅಧ್ಯಕ್ಷ, ಪಳ್ಳಂ ಬದರ್ ಜುಮಾ ಮಸೀದಿ ಸಮಿತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಿ.ಎಚ್. ಎಸ್.ಎಸ್. ಕುಂಬಳೆ, ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಅಂಗಡಿಮೊಗರು ಹೈಯರ್ ಸೆಕೆಂಡರಿ ಶಾಲೆ, ಹೇರೂರು ಜಿಎಚ್‌ಎಸ್‌ಎಸ್ ಎಂಬೆಡೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕಾಸರಗೋಡು ನೆಲ್ಲಿಕುಂಜೆ ಸರಕಾರಿ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಮಕ್ಕಳಾದ ಮುಹಮ್ಮದ್ ಶರೀಫ್, ಅಬ್ದುಲ್ ಅಸೀಸ್, ಅಬೂಬಕರ್ ಸಿದ್ದಿಕ್ ಒಳಮೊಗರು (ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಕಾರ್ಯದರ್ಶಿ), ಅಬ್ದುಲ್ ಸತ್ತಾರ್, ಅಳಿಯ-ಸೊಸೆಯಂದಿರಾದ ಶಂಸೀದ ಮಿಸ್ರಿಯ, ರಮೀನ, ಬುಶ್ರ, ಜುಬೈರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಶಾಸಕ ಎಕೆಎಂ ಅಶ್ರಫ್ ಅವರು ಬಾಪುಂಞಿಯವರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

You cannot copy contents of this page