ಪೆರಿಯ ಅವಳಿ ಕೊಲೆ ಪ್ರಕರಣದ ಆರೋಪಿ ಕೆ. ಮಣಿಕಂಠನ್ ಬ್ಲೋಕ್ ಪಂ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಹಾಗೂ ೫ ವರ್ಷ ಜೈಲು ಶಿಕ್ಷೆಲಭಿಸಿದ ಕೆ. ಮಣಿಕಂಠನ್ ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಬ್ಲೋಕ್ ಪಂ. ಕಾರ್ಯ ದರ್ಶಿಗೆ ಶನಿವಾರ ಹಸ್ತಾಂತರಿಸಿದ್ದಾರೆ. ಪ್ರಕರಣದಲ್ಲಿ ಮಣಿಕಂಠನ್ ಸಹಿತ ೪ ಮಂದಿಗೆ ಕೊಚ್ಚಿ ಸಿಬಿಐ ನ್ಯಾಯಾಲಯ ೫ ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆಯನ್ನು ಹೈಕೋರ್ಟ್ ನಿಷ್ಕ್ರಿಯಗೊಳಿಸಿದ ಹಿನ್ನೆಲೆಯಲ್ಲಿ ಮಣಿಕಂಠನ್ ಜಾಮೀನಿನಲ್ಲಿ ಹೊರ ಬಂದಿದ್ದರು.
ಕೊಲೆ ಪ್ರಕರಣದಲ್ಲಿ ಆರೋಪಿ ಯಾದ ಇವರನ್ನು ಅಯೋಗ್ಯರನ್ನಾಗಿ ಮಾಡಬೇಕೆಂದು ಆಗ್ರಹಿಸಿ ಬ್ಲೋಕ್ ಪಂ. ಸದಸ್ಯ ಕಾಂಗ್ರೆಸ್ನ ಎಂ.ಕೆ. ಬಾಬುರಾಜ್ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ತಿಂಗಳ ೨೬ರಂದು ಅಂತಿಮ ಹೇಳಿಕೆ ದಾಖಲು ನಡೆಯ ಲಿರುವಂತೆ ಮಣಿಕಂಠನ್ ರಾಜೀನಾಮೆ ನೀಡಿದ್ದಾರೆ. ಸದಸ್ಯತನಕ್ಕೆ ಕೂಡಾ ಇದೇ ವೇಳೆ ರಾಜೀನಾಮೆ ಸಲ್ಲಿಸಿದ್ದಾರೆ.