ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಸಿ.ಪಿ. ಬಾಬು ಆಯ್ಕೆ

ಕಾಸರಗೋಡು: ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಸಿ.ಪಿ. ಬಾಬುರನ್ನು ವೆಳ್ಳರಿಕುಂಡ್‌ನಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ ದ್ವಿತೀಯ ಬಾರಿಗೆ ಆಯ್ಕೆ ಮಾಡಲಾಗಿದೆ. 1975ರಲ್ಲಿ ಬಾಲವೇದಿ ಘಟಕ ಕಾರ್ಯದರ್ಶಿಯಾಗಿ ಸಂಘಟನಾ ಚಟುವಟಿಕೆಗೆ ಇಳಿದ ಇವರು 1984ರಲ್ಲಿ ಎಐಎಸ್‌ಎಫ್ ಜಿಲ್ಲಾ ಕಾರ್ಯದರ್ಶಿಯಾಗಿಯೂ, 1992ರಲ್ಲಿ ಜಿಲ್ಲಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಎಳೇರಿತಟ್ ನಿವಾಸಿಯಾದ ಇವರು ಪಕ್ಷದ ವಿವಿಧ ಹುದ್ದೆಗಳಲ್ಲಿ ಸಕ್ರಿಯರಾಗಿದ್ದರು. ಕಯ್ಯೂರು ಹುತಾತ್ಮ ಪೊಡೋರ ಕುಂಞಂಬು ನಾಯರ್‌ರ ಸಹೋದರಿಯ ಮಗನಾಗಿದ್ದಾರೆ. ಇವರು ಪತ್ನಿ ಎನ್. ಗೀತ, ಮಕ್ಕಳಾದ ಸ್ನೇಹಬಾಬು, ಅರ್ದೇಂದು ಭೂಷಣ್ ಬಾಬು, ಅಳಿಯ ಜಿತಿನ್ ಜಯದೇವನ್‌ರನ್ನು ಹೊಂದಿದ್ದಾರೆ.

ಸಮ್ಮೇಳನದಲ್ಲಿ ಮೂರು ಕ್ಯಾಂಡಿಡೇಟ್ ಸದಸ್ಯರು ಸಹಿತ ೩೮ ಸದಸ್ಯರನ್ನು ಜಿಲ್ಲಾ ಕೌನ್ಸಿಲ್‌ಗೂ, ೯ ಮಂದಿಯನ್ನು ರಾಜ್ಯ ಸಮ್ಮೇಳನ ಪ್ರತಿನಿಧಿಗಳಾಗಿಯೂ ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ಎಕ್ಸಿಕ್ಯೂಟಿವ್‌ಗಳಾದ ಕೆ. ಪ್ರಕಾಶ್ ಬಾಬು, ಪಿ. ಸಂತೋಷ್ ಕುಮಾರ್ ಎಂ.ಪಿ, ರಾಜ್ಯ ಅಸಿಸ್ಟೆಂಟ್ ಸೆಕ್ರೆಟರಿ ಇ. ಚಂದ್ರಶೇಖರನ್, ರಾಜ್ಯ ಕಂಟ್ರೋಲ್ ಕಮಿಷನ್ ಅಧ್ಯಕ್ಷ ಸಿ.ಪಿ. ಮುರಳಿ, ರಾಜ್ಯ ಎಕ್ಸಿಕ್ಯೂಟಿವ್ ಸದಸ್ಯರಾದ ಪಿ. ವಸಂತ, ಕೆ.ಕೆ. ಅಶ್ರಫ್, ಟಿ.ವಿ. ಬಾಲನ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸಿ.ಪಿ. ಬಾಬು ಚರ್ಚೆಗೆ ಉತ್ತರ ನೀಡಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಉಂಟಾದ ಗಂಭೀರ ಲೋಪದ ವಿರುದ್ಧ ಕ್ರಮ ಕೈಗೊಳ್ಳಬೇಕು, ಜಿಲ್ಲೆಯ ಆರೋಗ್ಯವಲಯದಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಮ್ಮೇಳನದಲ್ಲಿ ಒತ್ತಾಯಿಸಲಾಯಿತು.

You cannot copy contents of this page