ರಸ್ತೆ ಬದಿ ವಿಶ್ರಾಂತಿ ನಿಲ್ದಾಣ ಯೋಜನೆ: ಮಂಜೇಶ್ವರದ ಸಮಗ್ರ ಅಭಿವೃದ್ಧಿ ಗುರಿ

ಮಂಜೇಶ್ವರ: ಮಂಜೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೆರವಾಗಬಹುದಾದ ಬೃಹತ್ ಯೋಜನೆಯೊಂದಕ್ಕೆ ಚಾಲನೆ ನೀಡಲಾಗಿದೆ. ಸುಮಾರು ೩೫ ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಕಿಫ್‌ಬಿ ಸಹಾಯದೊಂದಿಗೆ ಕಾರ್ಯ ಗತಗೊಳಿಸುವ ಈ ಯೋಜನೆಗೆ ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು.  ಸಂಯೋಜಿತ ಚೆಕ್ ಪೋಸ್ಟ್ ಗಾಗಿ ಮೀಸಲಿಟ್ಟ ಮಂಜೇಶ್ವರದ ಸ್ಥಳದಲ್ಲಿ ವಿಶ್ರಾಂತಿ ನಿಲ್ದಾಣದ ಬೃಹತ್ ಯೋಜನೆ ಜ್ಯಾರಿಗೆ ಬರಲಿದೆ. ಹೊಸಂಗಡಿ ಮತ್ತು ವಾಮಂಜೂರು ಚೆಕ್ ಪೋಸ್ಟ್ ನಡುವಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಭೂಮಿಯಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ.

ಓವರ್‌ಸೀಸ್ ಕೇರಳೈಟ್ಸ್ ಇನ್‌ವೆಸ್ಟ್‌ಮೆಂಟ್ ಮತ್ತು ಹೋಲ್ಡಿಂಗ್ ಲಿಮಿಟೆಡ್ ಕಂಪೆನಿ  ಈ  ಯೋಜನೆ ಯನ್ನು ಆರಂಭಿಸಲಿದೆ. ಇದಕ್ಕಾಗಿ  ಕೇರಳ ಸರಕಾರದ ಕೈವಶವಿದ್ದ ೫ ಎಕ್ರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ರಾಜ್ಯದ ವಿವಿಧ ಕಡೆಗಳ ೩೦ ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವಿಶ್ರಾಂತಿ ನಿಲ್ದಾಣಗಳನ್ನು ನಿರ್ಮಿಸುವ ಯೋಜನೆಯಂತೆ  ಹೊಸಂಗಡಿ ಬಳಿ ಈಗ ಈ ಯೋಜನೆಗೆ ಚಾಲನೆ ನೀಡ ಲಾಗಿದೆ. ಇದರಲ್ಲಿ ರೆಸ್ಟೋರೆಂಟ್‌ಗಳು, ಫುಡ್ ಕೋರ್ಟ್, ಕ್ಲೀನಿಕ್, ಇಂಧನ ನಿಲ್ದಾಣ, ವಾಹನ ನಿರ್ವಹಣಾ ಸೌಲಭ್ಯಗಳು, ಕ್ಯಾರವಾನ್ ಪಾರ್ಕಿಂಗ್, ಉತ್ತಮ ಗುಣಮಟ್ಟದ ಶೌಚಾಲಯ ಬ್ಲೋಕ್‌ಗಳು, ಕೊಠಡಿಗಳು, ಪ್ರಯಾಣಿಕರ ವಿಶ್ರಾಂತಿ ಕೋಣೆ, ಸಮ್ಮೇಳನ-ಸಭೆ ನಡೆಸಬಹುದಾದ ಕೊಠಡಿಗಳು ಒಳಗೊಂಡಿವೆ.  ಜಿಎಸ್‌ಟಿ ಜ್ಯಾರಿಗೆ ಬಂದ ಬಳಿಕ ಹೊಸಂಗಡಿ ಬಳಿ ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್‌ಗಳು ತೆರವಾಗಿತ್ತು. ಈ ಸ್ಥಳವನ್ನು ಈಗ ಈ ಯೋಜನೆಗಾಗಿ  ಬಳಸಲಾಗಿದೆ.  ಲುಲು ಗ್ರೂಪ್‌ಗೆ ಸೇರಿದ ಸ್ಟಾಲ್‌ಗಳು ಇಲ್ಲಿ ಕಾರ್ಯಾಚರಿಸಲಿದ್ದು ಎರಡು ವರ್ಷದೊಳಗೆ ನಿರ್ಮಾಣ ಪೂರ್ತಿಗೊಳ್ಳುವ ನಿರೀಕ್ಷೆಯಿದೆ. ಊರಾಳುಂಗಲ್ ಕಂಪೆನಿ ಇದರ ಗುತ್ತಿಗೆ ವಹಿಸಿಕೊಂಡಿದೆ.

ಹಿಂದುಳಿದ ಮಂಜೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಈ ಯೋಜನೆಗಾಗಿ ಅನುಮತಿ ನೀಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಲೋಕೋಪ ಯೋಗಿ ಸಚಿವ ಮೊಹಮ್ಮದ್ ರಿಯಾಸ್‌ರನ್ನು ಮಂಜೇಶ್ವರದ ಜನತೆಯ ಪರವಾಗಿ ಅಭಿನಂದಿಸುತ್ತಿರುವುದಾಗಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಕೆ.ಆರ್. ಜಯಾನಂದ ತಿಳಿಸಿದ್ದಾರೆ.

You cannot copy contents of this page