ಕುಂಬಳೆ: ತಮ್ಮ ಬೇಡಿಕೆಯನ್ನು ನಾಲ್ಕು ದಿನಗಳೊಳಗೆ ಜ್ಯಾರಿಗೊಳಿಸದಿದ್ದರೆ ಬಸ್ಗಳನ್ನು ಕುಂಬಳೆಯಲ್ಲಿ ತಡೆಯುವುದಾಗಿ ಮರ್ಚೆಂಟ್ಸ್ ಅಸೋಸಿಯೇಶನ್ ಪ್ರತಿನಿಧಿಗಳು ಪೊಲೀಸರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಹಾಗಿದ್ದರೆ ಕಾನೂನು ಕ್ರಮ ಎದುರಿಸಲು ಬಸ್ ತಡೆಯುವವರು ಸಿದ್ಧರಾಗಿಕೊಳ್ಳಬೇಕೆಂದು ಪೊಲೀಸರು ಸೂಚಿಸಿದ್ದಾರೆ. ಕಳೆದ ಪಂಚಾಯತ್ ಆಡಳಿತ ಸಮಿತಿ ಬದಲಿಸಿದ ಬಸ್ ತಂಗುದಾಣಗಳನ್ನು ಆಂಶಿಕವಾಗಿ ಹಳೆಯ ಸ್ಥಳದಲ್ಲೇ ಪುನರ್ ಸ್ಥಾಪಿಸಬೇಕೆಂಬ ಈಗಿನ ಪಂಚಾಯತ್ ಆಡಳಿತ ಸಮಿತಿಯ ನಿರ್ದೇಶ ಬಸ್ ನೌಕರರು ಅವಗಣಿಸಿದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿದ್ದು, ಪೊಲೀಸರು ಈ ಸಂಬಂಧ ಸಂಬಂಧಪಟ್ಟವರ ಸಭೆ ಕರೆದಿದ್ದರು.
ಪಂಚಾಯತ್ ಆಡಳಿತಾಧಿಕಾರಿಗಳು, ಬಸ್ ಮಾಲಕರು, ಕಾರ್ಮಿಕ ಯೂನಿಯನ್ ಪದಾಧಿಕಾರಿ ಗಳು, ಪ್ರಯಾಣಿಕರ ಪ್ರತಿನಿಧಿಗಳು ಎಂಬಿವರು ಭಾಗವಹಿಸಿದ ಸಭೆಯಲ್ಲಿ ಆಗಾಗ ನಾಲ್ಕೈದು ಮಂದಿಗೆ ಬೇಕಾಗಿ ಬಸ್ ತಂಗುದಾಣಗಳನ್ನು ಬದಲಿಸುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಕಾರ್ಮಿಕರು ಖಡಾಖಂಡಿತವಾಗಿ ನುಡಿದರು. ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗೂ, ಆರ್ಟಿಒಯವರಿಗೂ ವರದಿ ನೀಡುವುದಾಗಿಯೂ, ಅವರ ತೀರ್ಮಾನ ಉಂಟಾಗುವವರೆಗೆ ಈಗ ಇರುವ ಸ್ಥಿತಿಯೇ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ ಹಿನ್ನೆಲೆಯಲ್ಲಿ ವ್ಯಾಪಾರಿ ಪ್ರತಿನಿಧಿಗಳು ನಾಲ್ಕು ದಿನ ಕಾಯುವುದಾಗಿಯೂ ಐದನೇ ದಿನ ಬಸ್ಸನ್ನು ತಡೆಯುವುದಾಗಿ ತಿಳಿಸಿದ್ದಾರೆ. ಅದಕ್ಕೆ ಉತ್ತರವಾಗಿ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿರಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ. ಇದರಿಂದ ಸಭೆಯಲ್ಲಿ ಯಾವುದೇ ತೀರ್ಮಾನವಾಗಲಿಲ್ಲ.






