ಕಾಸರಗೋಡು: ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಪೋಟ ಗೊಂಡು ವಿವಿಧ ಸಾಮಗ್ರಿಗಳು ಉರಿದು ನಾಶಗೊಂಡ ಘಟನೆ ತೃಕರಿಪುರ ಬೀರಿಚ್ಚೇರಿ ಎಂಬಲ್ಲಿ ಸಂಭವಿಸಿದೆ. ಸ್ಫೋಟದ ಸದ್ದು ಕೇಳಿ ಕುಟುಂಬ ಮನೆಯಿಂದ ಹೊರಗೆ ಓಡಿದುದರಿಂದ ಭಾರೀ ದುರಂತ ತಪ್ಪಿಹೋಗಿದೆ.
ನಿನ್ನೆ ಅಪರಾಹ್ನ ೩ ಗಂಟೆ ವೇಳೆ ಬೀರಿಚ್ಚಾರಿ ಕುಲೇರಿ ಎಂಬಲ್ಲಿನ ಕೆ.ಪಿ. ನಿಸಾರ್ರ ಮನೆಯಲ್ಲಿ ಈ ದುರ್ಘಟನೆ ಉಂಟಾಗಿದೆ. ಆಹಾರ ತಯಾರಿಸುತ್ತಿದ್ದಾಗ ಸಿಲಿಂಡರ್ನಿಂದ ಅನಿಲ ಸೋರಿಕೆ ಉಂಟಾಗಿದ್ದು ಅಲ್ಪ ಹೊತ್ತಿನಲ್ಲೇ ಸ್ಫೋಟ ಉಂಟಾಗಿದೆ. ತಕ್ಷಣ ಬೆಂಕಿ ಹತ್ತಿಕೊಂಡಿತ್ತೆನ್ನಲಾಗಿದೆ. ಈ ಹೊತ್ತಿನಲ್ಲಿ ಮನೆಯೊಳಗೆ ಎರಡುತಿಂಗಳು ಪ್ರಾಯದ ಮಗು ಸಹಿತ ನಾಲ್ಕು ಮಂದಿಯಿದ್ದರು. ಮಗುವನ್ನು ಎತ್ತಿಕೊಂಡು ಎಲ್ಲರೂ ಹೊರಗೆ ಓಡಿದುದರಿಂದ ಭಾರೀ ದುರಂತ ತಪ್ಪಿಹೋಗಿದೆ. ವಿಷಯ ತಿಳಿದು ತೃಕರಿಪುರದಿಂದ ಅಗ್ನಿಶಾಮ ಕದಳ ತಲುಪಿ ಬೆಂಕಿ ನಂದಿಸಿದೆ. ದುರ್ಘಟನೆಯಿಂದ ಎರಡಂತಸ್ತಿನ ಮನೆಯ ಅಡುಗೆ ಕೋಣೆ ಪೂರ್ಣವಾಗಿ ಉರಿದಿದ್ದು ಫ್ರಿಡ್ಜ್, ಮಿಕ್ಸಿ ಮತ್ತಿತರ ಗೃಹೋಪಕರಣಗಳು ನಾಶಗೊಂಡಿದೆ.






