ಕುಂಬಳೆ: ವ್ಯಾಪಾರಿಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಹಲ್ಲೆಗೈದು ಅವರ ಕಾರನ್ನು ಅಪಹರಿಸಿಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಲ್ಪಾಡಿಯ ಶಂಸೀರ್, ಅಯಾಸ್ ಸೇರಿದಂತೆ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ. ಬಂದ್ಯೋಡು ಹಾಗೂ ಮಂಗಳೂರಿನಲ್ಲಿ ವ್ಯಾಪಾರ ನಡೆಸುವ ಮಳ್ಳಂಗೈಯ ಅಲಿ ಮುಕ್ತಾದ್ (34) ಎಂಬವರಿಗೆ ಹಲ್ಲೆಗೈದು ಅವರ ಕಾರನ್ನು ಅಪಹರಿಸಿದ ಸಂಬಂಧ ಈ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ 31ರಂದು ಸಂಜೆ ಅಡ್ಕ ಗುರ್ಮೆ ಸಾರ್ವಜನಿಕ ಸ್ಮಶಾನ ಸಮೀಪ ಅಲಿ ಮುಕ್ತಾದ್ರ ಕಾರನ್ನು ತಂಡ ತಡೆದು ನಿಲ್ಲಿಸಿ ೫೦ ಸಾವಿರ ರೂಪಾಯಿ ನೀಡುವಂತೆ ಒತ್ತಾಯಿಸಿದೆ. ಆದರೆ ಹಣ ನೀಡಲು ಮುಂದಾಗದ ಹಿನ್ನೆಲೆಯಲ್ಲಿ ಅಲಿ ಮುಕ್ತಾದ್ರನ್ನು ತಂಡ ಕಾರಿನಿಂದ ಹೊರಗೆ ಎಳೆದು ಹಾಕಿ ಹಲ್ಲೆಗೈದು ಮೊಬೈಲ್ ಚಾರ್ಜಿಂಗ್ ಕೇಬಲ್ನಿಂದ ಕುತ್ತಿಗೆಗೆ ಬಿಗಿದು ಬಳಿಕ ಅವರ ಕಾರು ಹಾಗೂ ಐಫೋನ್ನ್ನು ಕಸಿದು ಪರಾರಿಯಾಗಿರುವುದಾಗಿ ಆರೋಪಿಸಲಾಗಿದೆ.






