ಭಜನಾ ಮಂದಿರದ ಕಾಣಿಕೆಹುಂಡಿಯಿಂದ ಹಣ ಕಳವು: ಬಂಧಿತ ಆರೋಪಿಗೆ ರಿಮಾಂಡ್ ತಲೆಮರೆಸಿಕೊಂಡಾತನಿಗಾಗಿ ಶೋಧ

ಅಡೂರು: ಪಾಂಡಿಬಯಲಿನಲ್ಲಿ ರುವ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಕಾಣಿಕೆ ಹುಂಡಿ ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾದ ಪಾಂಡಿಬಯಲು ನಿವಾಸಿ ಸುರೇಶ್ (೨೦) ಎಂಬಾತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಇದೇ ವೇಳೆ ಈ ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡ ಇನ್ನೋರ್ವ ಆರೋಪಿ ವಿಜೇಶ್ ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಳೆದ ಆದಿತ್ಯವಾರ ರಾತ್ರಿ ಭಜನಾ ಮಂದಿರದ ಕಾಣಿಕೆ ಹುಂಡಿ ಯಿಂದ ಸುರೇಶ್ ಹಾಗೂ ವಿಜೇಶ್ ಸೇರಿ ಹಣ ಕಳವು ನಡೆಸಿದ್ದಾರೆಂದು ದೂರಲಾಗಿದೆ. ಭಜನಾ ಮಂದಿರದಿಂದ ಕಳವು ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಅಲ್ಲಿಗೆ ತೆರಳಿದಾಗ ಕಳವು ನಡೆಸಿ ಆರೋಪಿಗಳು ಓಡಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸುರೇಶ್‌ನನ್ನು ಸೆರೆ ಹಿಡಿಯಲಾಗಿತ್ತು. ಈ ವಿಷಯ ತಿಳಿದು ಅಲ್ಲಿಗೆ ತಲುಪಿದ ಆದೂರು ಠಾಣೆ ಇನ್ಸ್‌ಪೆಕ್ಟರ್ ಪಿ.ಸಿ. ಸಂಜಯ್ ಕುಮಾರ್ ಆರೋಪಿಯನ್ನು ಬಂಧಿಸಿದ್ದಾರೆ. ಈ ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡ ವಿಜೇಶ್‌ಗಾಗಿ ಶೋಧ ನಡೆಸುತ್ತಿರು ದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page