ಟ್ಯಾಬ್ ಖರೀದಿಸಿ ಹಣ ನೀಡದೆ ಅಪ್ರತ್ಯಕ್ಷಗೊಂಡ ಹತ್ತರಷ್ಟು ವಂಚನೆ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಟ್ಯಾಬ್ ಖರೀದಿಸಿದ ಬಳಿಕ ಅದರ ಹಣ ನೀಡದೆ ದಿಢೀರ್ ಆಗಿ ಅಪ್ರತ್ಯಕ್ಷಗೊಂಡ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಕೊಚ್ಚಿ ಇಡಪಳ್ಳಿ ನಿವಾಸಿ ಕಿಶೋರ್ ಶಂಕರ್ (41) ಬಂಧಿತ ಆರೋಪಿ. ನಂತರ ಆತನನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕಳೆದ ಜುಲೈ ೨೦ರಂದು ಆರೋಪಿ ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿಯ ಮೊಬೈಲ್ ಅಂಗಡಿಯೊಂದಕ್ಕೆ ಬಂದು ಅಲ್ಲಿಂದ  ಸ್ಯಾಮ್‌ಸಂಗ್ ಎಸ್-೯ ಮೋಡೆಲ್‌ನ ಟ್ಯಾಬ್ ಖರೀದಿಸಿದ್ದನು.

ಡಿಸ್ಕೌಂಟ್ ಕಳೆದ ಬಾಕಿ 32,492 ರೂ.ವನ್ನು ಬ್ಯಾಂಕ್ ಆಪ್‌ನ ಮೂಲಕ ಕಳುಹಿಸಿಕೊಡುವುದಾಗಿ ಅಂಗಡಿ ಮಾಲಕನಿಗೆ ತಿಳಿಸಿ ಟ್ಯಾಬ್‌ನೊಂದಿಗೆ ಅಪ್ರತ್ಯಕ್ಷಗೊಂಡಿದ್ದನು. ಇದು ನಡೆದ ಒಂದು ವಾರದ ಬಳಿಕ ಅಂದರೆ ಜುಲೈ 27ರಂದು ಅಂಗಡಿ ಮಾಲಕ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಎಸ್‌ಐ ಎಂ.ಟಿ.ಪಿ ಸೈಫುದ್ದೀನ್‌ರ ನೇತೃತ್ವದ ಪೊಲೀಸರ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಈ ಬಗ್ಗೆ ಪೊಲೀಸರು ದಾಖಲಿಸಿಕೊಂಡಿದ್ದ ಎಫ್‌ಐಆರ್‌ನಲ್ಲಿ ಆರೋಪಿಯ ಹೆಸರನ್ನು  ಕೊಚ್ಚಿ ನಾದಾಪುರಂ ಪ್ಯಾಲೆಸ್ ಎಂಬುದಾಗಿ ದಾಖಲಿಸಲಾಗಿತ್ತು. ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿ ಕೊಚ್ಚಿ ಇಡಪಳ್ಳಿ ನಿವಾಸಿಯಾಗಿರುವುದಾಗಿ ಸ್ಪಷ್ಟಗೊಂಡಿದೆ. ಆರೋಪಿ ಕಬಳಿಸಿದ ಟ್ಯಾಬ್‌ನ್ನು ಪತ್ತೆಹಚ್ಚುವ ಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ. ಬಂಧಿತ ಆರೋಪಿ ಇದೇ ರೀತಿ ಹಲವೆಡೆಗಳಲ್ಲಾಗಿ ನಡೆಸಿದ ಹತ್ತರಷ್ಟು ಪ್ರಕರಣಗಳಲ್ಲೂ ಆರೋಪಿಯಾಗಿರುವುದಾಗಿಯೂ, ನಾನು ಬ್ಯಾಂಕ್ ಮೆನೇಜರ್ ಆಗಿರುವುದಾಗಿ ನಂಬಿಸಿ ಆರೋಪಿ ಇಂತಹ ವಂಚನೆಗಳನ್ನು ನಡೆಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈತ ಬಂಧಿತನಾದ ವಿಷಯ ತಿಳಿದ ಇದೇ ರೀತಿ ವಂಚನೆಗೊಳಗಾದ ಇತರ ಹಲವರು  ಈಗ ಪೊಲೀಸರನ್ನು ಸಂಪರ್ಕಿ ಸತೊಡಗಿದ್ದು, ಆ ಬಗ್ಗೆಯೂ ತನಿಖೆ ಆರಭಿಸಿದ್ದಾರೆ.

RELATED NEWS

You cannot copy contents of this page