ಕಾಸರಗೋಡು: ರೈಲಿನಲ್ಲಿ ಬಾಂಬ್ ಇರಿಸಲಾಗಿದೆಯೆಂದು ಬೆದರಿಕೆ ಸಂದೇಶ ಕಳುಹಿಸಿದ ಯುವಕನನ್ನು ಸೆರೆಹಿಡಿಯಲಾಗಿದೆ. ಬಂಗಳಂ ನಿವಾಸಿ ರತೀಶ್ (42) ಸೆರೆಗೀಡಾದ ವ್ಯಕ್ತಿ. ಈತ ಮಲಬಾರ್ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇರಿಸಿ ರುವುದಾಗಿ ಬೆದರಿಕೆಯೊಡ್ಡಿದ್ದನು. ಬುಧವಾರ ರಾತ್ರಿ 7.30ರ ವೇಳೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆಮಾಡಿ ಬೆದರಿಕೆಯೊಡ್ಡಲಾಗಿದೆ. ಇದರಂತೆ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳ ಕಾಞಂಗಾಡ್ ರೈಲ್ವೇ ನಿಲ್ದಾಣಕ್ಕೆ ತಲುಪಿದ ವಿವಿಧ ರೈಲುಗಳನ್ನು ಪರಿಶೀಲನೆ ನಡೆಸಿವೆ. ಆದರೆ ಬಾಂಬ್ ಅಥವಾ ಬೇರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಅನಂತರ ಬೆದರಿಕೆ ಕರೆ ಬಂದ ಫೋನ್ನ ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆರೋಪಿ ಕಾಞಂಗಾಡ್ ಭಾಗದಲ್ಲಿರುವುದಾಗಿ ತಿಳಿದುಬಂದಿದೆ. ತಕ್ಷಣ ಕಾಞಂಗಾಡ್ ಡಿವೈಎಸ್ಪಿ ಅನಿಲ್ ಕುಮಾರ್, ಸಿಐ ದಿನೇಶನ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚ ರಣೆಯಲ್ಲಿ ಮಾವುಂಗಾಲ್ ಮೇಲ್ಸೇತು ವೆಯ ಅಡಿಯಿಂದ ಆರೋಪಿಯನ್ನು ಸೆರೆಹಿಡಿ ಯಲಾಗಿದೆ.






