ಮಂಜೇಶ್ವರ: ಕಾರಿನಲ್ಲಿ ಮಾರಕ ಮಾದಕವಸ್ತುವಾದ ಎಂಡಿಎಂಎ ಸಹಿತ ಪ್ರಯಾಣಿಸುತ್ತಿದ್ದ ಇಬ್ಬರನ್ನು ಮಂ ಜೇಶ್ವರ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ನೆಲ್ಲಿಕಟ್ಟೆ ಬಳಿಯ ಚರ್ಲಡ್ಕ ರಫಾ ಮಂ ಜಿಲ್ನ ಅಬೂಬಕ್ಕರ್ ಸಿದ್ದಿಕ್ (38), ತೆಕ್ಕಿಲ್ ಚಟ್ಟಂಚಾಲ್ ಕುನ್ನಾರು ನಿವಾಸಿ ಹಾರಿಸ್ ಪಿ (42) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ಕೈಯಿಂದ 3.21 ಗ್ರಾಂ ಎಂಡಿಎಂಎ, ಒಂದು ಇ ಸಿಗರೇಟ್, 12 ಪ್ಯಾಕೆಟ್ ಪಾನ್ ಮಸಲೆ ವಶಪಡಿಸಲಾಗಿದೆ. ಆರೋಪಿಗಳು ಸಂಚರಿಸಿದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ನಿನ್ನೆ ಸಂಜೆ 6.30ರ ವೇಳೆ ತಲಪ್ಪಾಡಿಯಲ್ಲಿ ಮಂಜೇಶ್ವರ ಇನ್ಸ್ಪೆಕ್ಟರ್ ಜಿಜೀಶ್ ನೇತೃತ್ವದಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಆಗಮಿಸಿದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ. ಸೆರೆಗೀಡಾದ ಆರೋಪಿಗಳ ಪೈಕಿ ಸಿದ್ದಿಕ್ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನರಹತ್ಯಾಯತ್ನ ಹಾಗೂ ಎಂಡಿಎಂಎ ಪ್ರಕರಣ ದಾಖಲಾಗಿದೆ. ಹಾರಿಸ್ ವಿರುದ್ಧ ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ನರಹತ್ಯಾಯತ್ನ, ಹಲ್ಲೆ ಸಹಿತ ಮೂರು ಪ್ರಕರಣಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಸ್ಐಗಳಾದ ಉಮೇಶ್ ಕೆ.ಆರ್, ವೈಷ್ಣವ್ ರಾಮಚಂದ್ರನ್, ಎಎಸ್ಐ ಸದನ್, ಪೊಲೀಸರಾದ ದಿನೇಶ್, ಸಜೀಶ್ ಎಂಬವರಿದ್ದರು. ಇದೇ ವೇಳೆ ಪೊಲೀಸರ ಕಾರ್ಯಾಚರಣೆ ವೇಳೆ ಆರೋಪಿಗಳು ಪರಾರಿಯಾಗಲೆತ್ನಿಸಿದ್ದು, ಈವೇಳೆ ಪೊಲೀಸ್ ಸಜೀಶ್ ಗಾಯಗೊಂಡಿದ್ದಾರೆ.






