ಉಪ್ಪಳದಲ್ಲಿ ಮಹಿಳಾ ಬಿಎಲ್‌ಒರನ್ನು ತಡೆದು ನಿಲ್ಲಿಸಿ ಬೆದರಿಕೆ: ಎಸ್‌ಐಆರ್ ಮಾಹಿತಿಗಳನ್ನು ವಾಟ್ಸಪ್‌ನಲ್ಲಿ ಹಂಚಿದ ಬಿಜೆಪಿ ಕಾರ್ಯಕರ್ತ ಸೆರೆ

ಉಪ್ಪಳ: ಮಹಿಳಾ ಬಿಎಲ್‌ಒರನ್ನು ತಡೆದು ನಿಲ್ಲಿಸಿ ಎಸ್‌ಐಆರ್ ಮಾಹಿತಿ ಗಳನ್ನು ಫೋನಿಗೆ ವರ್ಗಾಯಿಸಿ ವಾಟ್ಸಪ್ ಗ್ರೂಪ್‌ನಲ್ಲಿ ಪ್ರಚಾರಪಡಿಸಿರುವುದಾಗಿ ದೂರಲಾಗಿದೆ.

ಘಟನೆಯಲ್ಲಿ ಬಿಜೆಪಿ ಕಾರ್ಯ ಕರ್ತ ಉಪ್ಪಳ ಮಣಿಮುಂಡ ನಿವಾಸಿ ಇ.ಎಸ್. ಅಮಿತ್ (38)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಅಪರಾಹ್ನ 2.30 ಕ್ಕೆ ಉಪ್ಪಳ ಬಸ್ ನಿಲ್ದಾಣ ಸಮೀಪದಲ್ಲಿ ಘಟನೆ ನಡೆದಿದೆ. ಬಿಎಲ್‌ಒ ಆದ ಬೇಕೂರು ಕನ್ನಟಿಪಾರೆ ಮಾತೃನಿಲಯ ನಿವಾಸಿ ಎ. ಸುಭಾಷಿಣಿ (41) ದೂರು ನೀಡಿದ್ದಾರೆ. ಎಸ್‌ಐಆರ್ ಡಾಟಾ ಸಂಗ್ರಹ ನಡೆಸಿ ಹಿಂತಿರುಗು ತ್ತಿದ್ದಾಗ ಘಟನೆ ನಡೆದಿರುವುದಾಗಿ ದೂರಲಾಗಿದೆ.   ಬಿಎಲ್‌ಒ ಆದ ಸುಭಾಷಿಣಿಯವರನ್ನು ಅಮಿತ್ ತಡೆದು ನಿಲ್ಲಿಸಿ ಬೆದರಿಸಿರುವುದಾಗಿ ಮಂಜೇಶ್ವರ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ತಿಳಿಸಲಾಗಿದೆ. ದೂರುದಾತೆಯ ಕೈಯಲ್ಲಿದ್ದ ಫೋನ್ ತೆಗೆದು ಎಸ್‌ಐಆರ್ ಮಾಹಿತಿಗಳ ಆಪ್ಲಿಕೇಷನ್ ತೆರೆದು ತೋರಿಸಲು ಆಗ್ರಹಿಸಿದ್ದು, ಆ ವಿವರಗಳನ್ನು ಆರೋಪಿಯ ಫೋನಿಗೆ ವರ್ಗಾಯಿಸಿಕೊಂಡು ಅದನ್ನು ಇತರ ವಾಟ್ಲಪ್ ಗ್ರೂಪ್‌ನಲ್ಲಿ ಹಾಕಿ ಕರ್ತವ್ಯ ನಿರ್ವಹಣೆಗೆ ತಡೆಯೊಡ್ಡಿರುವುದಾಗಿ ಕೇಸಿನಲ್ಲಿ ವಿವರಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಯ ನಿರ್ದೇಶ ಪ್ರಕಾರ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

You cannot copy contents of this page