ಬಸ್‌ನಲ್ಲಿ ಸಾಗಿಸುತ್ತಿದ್ದ 67.5 ಲಕ್ಷ ರೂ. ಕಾಳಧನ ವಶ: ಓರ್ವ ಸೆರೆ

ಮಂಜೇಶ್ವರ: ಬಸ್‌ನಲ್ಲಿ ಸಾಗಿಸುತ್ತಿದ್ದ ೬೭.೫ ಲಕ್ಷ ರೂಪಾಯಿ ಕಾಳಧನವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿ ಓರ್ವನನ್ನು ಬಂಧಿಸಿದ್ದಾರೆ. ವಾಮಂಜೂರು ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ನಿನ್ನೆ ನಡೆಸಿದ ವಾಹನ ತಪಾಸಣೆ ವೇಳೆ ತಲಪಾಡಿ ಭಾಗದಿಂದ ಬರುತ್ತಿದ್ದ  ಬಸ್‌ನಲ್ಲಿ ಹಣ ಸಾಗಾಟ ಪತ್ತೆಯಾಗಿದೆ. ಈ ಸಂಬಂಧ ತಳಿಪರಂಬ ಚೇಲೇರಿಮುಕ್ ನಿವಾಸಿ ಸಮೀರ್ (41) ಎಂಬಾತನನ್ನು ಬಂಧಿಸಲಾಗಿದೆ. ಸಿ.ಐ. ಶಿಜಿಲ್ ಕುಮಾರ್, ಅಬಕಾರಿ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಎಂಬಿವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಕಾಳಧನ ಪತ್ತೆಯಾಗಿದೆ. ಇದೇ ವೇಳೆ ಪ್ರಕರಣದಿಂದ ಪಾರು ಮಾಡಲು ಅಧಿಕಾರಿಗಳಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಆರೋಪಿ ತಿಳಿಸಿದ್ದಾನೆನ್ನಲಾಗಿದೆ. ವಶಪಡಿಸಿದ ಹಣವನ್ನು ಯೂನಿಯನ್ ಬ್ಯಾಂಕ್‌ನ ಹೊಸಬೆಟ್ಟು ಶಾಖೆಯಲ್ಲಿ ಪರಿಶೀಲಿಸಿ ಎಣಿಕೆ ಮಾಡಲಾಯಿತು. ಬಳಿಕ ಹಣ ಹಾಗೂ ಆರೋಪಿಯನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಯಿತು.

ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜನಾರ್ದನನ್, ಪ್ರಿವೆಂಟಿವ್ ಆಫೀಸರ್‌ಗಳಾದ ನೌಶಾದ್, ಪ್ರಶಾಂತ್ ಕುಮಾರ್ ಎಂಬಿವರು ಅಬಕಾರಿ ತಂಡದಲ್ಲಿದ್ದರು.

You cannot copy contents of this page