ಕಾಸರಗೋಡು: ರೈಲ್ವೇ ನಿಲ್ದಾಣದಲ್ಲಿ ಮರೆತುಹೋದ ೬೩ ಸಾವಿರ ರೂಪಾಯಿಗಳಿದ್ದ ಬ್ಯಾಗನ್ನು ಮುಖ್ಯೋಪಾಧ್ಯಾಯಿನಿಗೆ ಮರಳಿ ತಲುಪಿಸಿ ರೈಲ್ವೇ ಶುಚೀಕರಣ ಸಿಬ್ಬಂದಿ ಸಜಿನಿ ಎಂಬವರು ಪ್ರಾಮಾಣಿಕತೆ ಮೆರೆದಿದ್ದಾರೆ. ತಳಂಗರೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋ ಪಾಧ್ಯಾಯಿನಿ ಬಿಂದು ಈ ತಿಂಗಳ ೧೫ರಂದು ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ರೈಲು ನಿಲ್ದಾಣದಿಂದ ರೈಲಿನಲ್ಲಿ ಪ್ರಯಾಣಿಸಿದ್ದರು. ಅನಂತರವೇ ಅವರಿಗೆ ಹಣವಿದ್ದ ಬ್ಯಾಗ್ ರೈಲ್ವೇ ನಿಲ್ದಾಣದಲ್ಲಿ ಮರೆತು ಹೋಗಿರುವುದು ನೆನಪಾಗಿದೆ. ಇನ್ನು ಆ ಬ್ಯಾಗ್ ಮರಳಿ ಲಭಿಸಲಾರದೇ ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಇದೇ ಸಂದರ್ಭದಲ್ಲಿ ಶುಚೀಕರಣ ಸಿಬ್ಬಂದಿಯಾದ ಸಜಿನಿಗೆ ರೈಲ್ವೇ ನಿಲ್ದಾಣದಲ್ಲಿ ಬ್ಯಾಗ್ ಪತ್ತೆಯಾಗಿದೆ. ಕೂಡಲೇ ಅದನ್ನು ಆರ್ಪಿಎಫ್ಗೆ ಅವರು ಹಸ್ತಾಂತರಿಸಿ ದ್ದರು. ಅನಂತರ ನಡೆದ ತನಿಖೆಯಲ್ಲಿ ಬ್ಯಾಗ್ ತಳಂಗರೆ ಶಾಲೆ ಅಧ್ಯಾಪಿಕೆಯದ್ದೆಂದು ತಿಳಿದುಬಂತು. ಇದರಂತೆ ನಿನ್ನೆ ಅವರನ್ನು ರೈಲ್ವೇ ನಿಲ್ದಾಣಕ್ಕೆ ಬರುವಂತೆ ತಿಳಿಸಿ ಹಣ ಒಳಗೊಂಡ ಬ್ಯಾಗ್ನ್ನು ಮರಳಿ ನೀಡಲಾ ಯಿತು. ರೈಲ್ವೇ ಪ್ರಯಾಣಿಕರ ಸುರಕ್ಷತೆ, ಅವರ ಸೊತ್ತುಗಳ ಸಂರಕ್ಷಣೆಯನ್ನು ಖಾತರಿಪಡಿಸುವಲ್ಲಿ ಶುಚೀಕರಣ ಸಿಬ್ಬಂದಿ ಸಜಿನಿ ಹಾಗೂ ಆರ್ಪಿಎಫ್ ತೋರಿಸಿದ ಈ ಪ್ರಾಮಾಣಿಕತೆ ಇತರರಿಗೆ ಮಾದರಿಯಾಗಿದೆ. ಸಜಿನಿಯ ಪ್ರಾಮಾಣಿಕತೆಯನ್ನು ಪ್ರಯಾಣಿಕರು ಸಹಿತ ಅಧಿಕಾರಿಗಳು ಅಭಿನಂದಿಸಿದ್ದಾರೆ.






