ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ನಕಲಿ ಮತದಾರರನ್ನು ಮತದಾರರ ಯಾದಿಗೆ ಸೇರ್ಪಡೆಗೊಳಿಸಲು ಮುಸ್ಲಿಂ ಲೀಗ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಸಿಪಿಎಂ ನಗರಸಭಾ ಸಮಿತಿ ನೇತೃತ್ವದಲ್ಲಿ ನಗರಸಭೆಗೆ ಮಾರ್ಚ್ ನಡೆಸಿತು. ಚುನಾವಣೆಯ ಪೂರ್ವಭಾವಿಯಾಗಿ ಮತ್ತೊಮ್ಮೆ ಮತದಾರರನ್ನು ಸೇರ್ಪಡೆಗೊಳಿಸಲು ನೀಡಿದ ಅವಕಾಶದ ಲಾಭ ಪಡೆದು ಮುಸ್ಲಿಂ ಲೀಗ್ ಈ ಯತ್ನ ನಡೆಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. ಪ್ರಧಾನ ಅಂಚೆ ಕಚೇರಿ ಪರಿಸರದಿಂದ ಆರಂಭಗೊಂಡ ಮಾರ್ಚ್ಗೆ ನಗರಸಭಾ ದ್ವಾರದ ಬಳಿ ಪೊಲೀಸರು ತಡೆಯೊಡ್ಡಿದರು. ಮಾರ್ಚ್ ಹಾಗೂ ಧರಣಿಯನ್ನು ಜಿಲ್ಲಾ ಸಮಿತಿ ಸದಸ್ಯ ಟಿ.ಕೆ. ರಾಜನ್ ಉದ್ಘಾಟಿಸಿದರು. ನಗರಸಭಾ ಕೌನ್ಸಿಲರ್ ಎಂ. ಲಲಿತ ಅಧ್ಯಕ್ಷತೆ ವಹಿಸಿದರು. ಲೋಕಲ್ ಸೆಕ್ರೆಟರಿಗಳಾದ ಎಸ್. ಸುನಿಲ್, ಅನಿಲ್ ಚೆನ್ನಿಕರೆ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ಕೆ.ಎ. ಮುಹಮ್ಮದ್ ಹನೀಫ ಸ್ವಾಗತಿಸಿದರು.






