ಕಾಸರಗೋಡು: ಕಣಜದ ಹುಳು ಗಳ ದಾಳಿಯಿಂದ ಗಂಭೀರ ಅಸ್ವಸ್ಥಗೊಂಡು ವ್ಯಕ್ತಿಯೊಬ್ಬರು ಮೃತ ಪಟ್ಟ ಘಟನೆ ನಡೆದಿದೆ. ನೆಲ್ಲಿಕ್ಕಾತು ರುತ್ತಿ ಕಳಗಂ ನಿಲಮಂಗಲತ್ತ್ ಭಗವತೀ ಕ್ಷೇತ್ರದ ಸ್ಥಾನಿಕ ಕುಟ್ಟಿವಯಲ್ನ ಕಂಡೋತ್ತ್ಪುರತ್ತ್ ಕೆ.ಪಿ. ಕುಮಾರನ್ (55) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಕ್ಷೇತ್ರದ ಪಾಟು ಉತ್ಸವದಂಗವಾಗಿ ಮನೆಗಳಿಗೆ ಸಂದರ್ಶನ ನಡೆಸಿ ಕುಟ್ಟಿವಯಲ್ನ ತರವಾಡಿನಲ್ಲಿ ವಿಶ್ರಾಂತಿ ಪಡೆಯು ತ್ತಿದ್ದರು. ಈ ವೇಳೆ ಕಣಜದ ಹುಳಗಳು ಅವರ ಮೇಲೆ ದಾಳಿ ನಡೆಸಿವೆ. ಈ ವೇಳೆ ಅವರ ಜೊತೆಗಿದ್ದವರು ಓಡಿ ಪಾರಾಗಿದ್ದಾರೆ. ಕುಮಾರನ್ ಓಡಿ ತರವಾಡಿನ ಶೌಚಾಲಯದೊಳಗೆ ನುಗ್ಗಿ ಕುಸಿದು ಬಿದ್ದಿದ್ದರು. ಕೂಡಲೇ ನಾಗರಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ರಜನಿ ಮಯ್ಯಿಚ್ಚ, ಮಕ್ಕಳಾದ ಜಿಷ್ಣು, ವಿಷ್ಣು, ಸಹೋದರ ಕೃಷ್ಣನ್, ಸಹೋದರಿ ನಾರಾಯಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







