ಕಾಸರಗೋಡು: ಜಿಲ್ಲಾ ಮಟ್ಟದ ಓಣಂ ಹಬ್ಬಾಚರಣೆ ಕಾರ್ಯಕ್ರಮಗಳನ್ನು ಕಾಸರಗೋಡು ನಗರದಲ್ಲಿ ವಿಪುಲವಾಗಿ ಆಚರಿಸಲು ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ರೂಪೀಕರಣ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದರ ಯಶಸ್ವಿಗಾಗಿ ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷರಾಗಿ, ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಸಂಚಾಲಕರಾಗಿರುವ ಸಮಿತಿ ರೂಪೀಕರಿಸಲಾಯಿತು. ಕಾಸರಗೋಡು ಸರಕಾರಿ ಅತಿಥಿ ಮಂದಿರದಲ್ಲಿ ಜರಗಿದ ಸಭೆಯಲ್ಲಿ ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದರು.
ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್ನೊಂದಿಗೆ ಸೇರಿಕೊಂಡು ಮೆಗಾ ಹೂರಂಗವಲ್ಲಿ ಸ್ಪರ್ಧೆ ನಡೆಸಲಾಗುವುದು. ಮಹಿಳೆಯರಿಗೂ, ಪುರುಷರಿಗೂ ಹಗ್ಗಜಗ್ಗಾಟ ಸ್ಪರ್ಧೆ, ಹುಲಿವೇಷ ಸ್ಪರ್ಧೆ, ತಿರುವಾದಿರ ಎಂಬಿವುಗಳನ್ನು ಆಯೋಜಿಸಲಾಗುವುದು. ನಗರದಲ್ಲಿ ಸುಂದರವಾಗಿ ದೀಪಾಲಂಕಾರ ಮಾಡುವ ವ್ಯಾಪಾರ ಕೈಗಾರಿಕಾ ಸಂಸ್ಥೆಗಳಿಗೆ ನಗದು ಬಹುಮಾನ ನೀಡಲಾಗುವುದು. ಸಭೆಯಲ್ಲಿ ನಗರಸಭಾಧ್ಯಕ್ಷೆ ಶಾಹಿನಾ ಸಲೀಂ, ಬ್ಲೋಕ್ ಪಂ. ಅಧ್ಯಕ್ಷ ಅಬ್ದುಲ್ಲ ಕುಂಞಿ ಚೆರ್ಕಳ, ಚೆಂಗಳ, ಕಾರಡ್ಕ ಸಹಿತ ವಿವಿಧ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದರು.







