ಕಾಸರಗೋಡು: ನಗರದ ಕರಂದಕ್ಕಾಡ್ ಅಶ್ವಿನಿ ನಗರದ ಹೋಟೆಲ್ವೊಂದರ ಸಮೀಪದಿಂದ ತಂಡವೊಂದು ಕಾರಿನಲ್ಲಿ ಮೊನ್ನೆ ಮಧ್ಯಾಹ್ನ ಮೇಲ್ಪರಂಬ ನಿವಾಸಿ ಹನೀಫ ಎಂಬವರನ್ನು ಅಪಹರಿಸಿದ ಘಟನೆಗೆ ಸಂಬಂಧಿಸಿ ದೂರುದಾತ ಹಾಗೂ ಆರೋಪಿಗಳ ಸಹಿತ 8 ಮಂದಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಹಳೆಯ 2೦೦೦ ರೂ. ಮುಖಬೆಲೆಯ ನೋಟು ವ್ಯವಹಾರವೇ ಯುವಕನ ಅಪಹರಣಕ್ಕೆ ಕಾರಣವೆಂದು ಇದುವರೆಗೆ ನಡೆದ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶ ತಂಡದ ಓರ್ವನನ್ನು ತಡೆದು ನಿಲ್ಲಿಸಿ ಏಳೂವರೆ ಲಕ್ಷ ರೂ. ಅಪಹರಿಸಿದ ದ್ವೇಷದಿಂದ ಮೇಲ್ಪರಂಬ ನಿವಾಸಿ ಹನೀಫರನ್ನು ಅಪಹರಿಸಿರುವು ದಾಗಿ ಮೊದಲು ಸೆರೆಗೀಡಾದ ಆರೋಪಿ ಗಳು ಹೇಳಿಕೆ ನೀಡಿದ್ದರು. ಅಪಹರಿಸಿ ಕೊಂಡೊಯ್ದ ಕಾರಿನಲ್ಲಿದ್ದ ಆಂಧ್ರ ಪ್ರದೇಶದ ಚೆನ್ನಿ ರೆಡ್ಡಿ ಪಳ್ಳಿ ನಿವಾಸಿ ಸಿದಾನ ಓಂಕಾರ್ (25), ಗನಪಳ್ಳಿ ನಿವಾಸಿ ಮಾರುತಿ ಪ್ರಸಾದ್ ರೆಡ್ಡಿ (33), ಕಡಪ್ಪು ನಿವಾಸಿಗಳಾದ ಎ. ಶ್ರೀನಾಥ್ (26), ಪೃಥ್ವಿರಾಜ್ ರೆಡ್ಡಿ (31), ಕಾಸರಗೋಡು ನಿವಾಸಿಗಳಾದ ಮೇಲ್ಪ ರಂಬದ ಹನೀಫ (36), ಈ ಪ್ರಕರಣದ ಪ್ರಧಾನ ಸೂತ್ರಧಾರರೆಂದು ಹೇಳಲಾಗು ತ್ತಿರುವ ಪಾಲಕುನ್ನು ಕೋಟಪ್ಪಾರದ ಎಂ. ಶರೀಫ್ (44), ಚೆರ್ಕಳ ಬೇವಿಂಜೆಯ ಬಿ. ನೂರುದ್ದೀನ್ (42), ಚಟ್ಟಂಚಾಲ್ ಬೆಂಡಿಚ್ಚಾಲ್ನ ಕೆ. ವಿಜಯನ್ (55) ಬಂಧಿತ ಆರೋಪಿಗಳಾಗಿದ್ದಾರೆ.
ಕಾಸರಗೋಡನ್ನು ಕೇಂದ್ರೀಕರಿಸಿ ಅಮಾನ್ಯ ನೋಟುಗಳ ವ್ಯವಹಾರ ನಡೆಸುತ್ತಿರುವ ತಂಡವೊಂದು ಕಾರ್ಯಾಚರಿಸುತ್ತಿದೆ. ಇದರಲ್ಲಿ ಆಂಧ್ರ ಪ್ರದೇಶದ ತಂಡವೊಂದು ಶಾಮೀ ಲಾಗಿದೆ. ಈ ವ್ಯವಹಾರವೇ ಮೇಲ್ಪರಂಬ ನಿವಾಸಿಯನ್ನು ಅಪಹರಿಸಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮಾನ್ಯಗೊಳಿಸಿದ 2೦೦೦ ರೂ.ಗಳ ನೋಟುಗಳನ್ನು ಬಿಳುಪಿಸುವಿಕೆ ನಡೆಸುವ ಆಂಧ್ರ ತಂಡದ ಓರ್ವನನ್ನು ತಡೆದು ನಿಲ್ಲಿಸಿ ಆತನ ಕೈಯ್ಯಲ್ಲಿದ್ದ ಲಕ್ಷಾಂತರ ರೂ.ಗಳ ಅಸಲಿ ಹಣವನ್ನು ಅಪಹರಿಸಿರುವುದರ ದ್ವೇಷವೇ ಅಪಹರಣ ನಡೆಸಲು ಕಾರಣವೆಂದು ಹೇಳಲಾಗುತ್ತಿದೆ. ಅಮಾನ್ಯಗೊಳಿಸಿದ ನೋಟು ಬಿಳುಪಿಸುವಿಕೆ, ಅಪಹರಣ, ಹಣ ದರೋಡೆ ಎಂಬೀ ಆರೋಪಗಳಂತೆ ಒಂದು ತಂಡದ ವಿರುದ್ಧ ಕೇಸು ದಾಖಲಿಸಲಾಗಿದೆ.
ಬುಧವಾರ ಮಧ್ಯಾಹ್ನ ೧೨.೩೦ರ ವೇಳೆ ಮೇಲ್ಪರಂಬ ನಿವಾಸಿಯಾದ ಹನೀಫರನ್ನು ತಂಡ ಕಾರಿನಲ್ಲಿ ಅಪಹರಿಸಿತ್ತು. ಆಂಧ್ರ ಪ್ರದೇಶ ನೋಂ ದಾವಣೆಯ ಮಹೀಂದ್ರ ಸ್ಕಾರ್ಪಿಯೋ ಕಾರಿನಲ್ಲಿ ಬಲ ಪ್ರಯೋಗಿಸಿ ಹನೀಫರನ್ನು ಹತ್ತಿಸಿ ತಂಡ ಅಪಹರಿಸಿತ್ತು. ಬಳಿಕ ಇವರನ್ನು ಕರ್ನಾಟಕದಿಂದ ಸೆರೆ ಹಿಡಿಯುವುದರೊಂದಿಗೆ ಘಟನೆಯ ಸತ್ಯಾವಸ್ಥೆ ಬೆಳಕಿಗೆ ಬಂದಿದೆ. ತಂಡವನ್ನು ತನಿಖೆಗೊಳಪಡಿಸಿದಾಗ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭಿಸಿದೆ. ಬಳಿಕ ಹನೀಫ ಸಹಿತ ಕಾಸರಗೋಡಿನ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.






