ಕಾಸರಗೋಡು: ಚೆರ್ಕಳದಿಂದ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಜಂಕ್ಷನ್ವರೆಗಿರುವ 19 ಕಿ.ಮೀ. ರಸ್ತೆ ಶೋಚನೀಯ ಸ್ಥಿತಿಯಲ್ಲಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಮಾತ್ರವಲ್ಲದೆ ಈ ರಸ್ತೆಯಲ್ಲಿರುವ ಪಳ್ಳತ್ತಡ್ಕ ಸೇತುವೆ ಕೂಡಾ ಯಾವುದೇ ಸಮಯದಲ್ಲಿ ಕುಸಿಯುವ ಭೀತಿಯೊ ಡ್ಡುತ್ತಿದೆ. ಆದ್ದರಿಂದ ಈ ರಸ್ತೆ ಹಾಗೂ ಸೇತುವೆಯನ್ನು ಶೀಘ್ರ ಅಭಿವೃದ್ಧಿಪಡಿಸಬೇಕೆಂದು ಕೇರಳ ಸ್ಟೇಟ್ ಪ್ರೈವೆಟ್ ಬಸ್ ಆಪರೇಟರ್ಸ್ ಫೆಡರೇಶನ್ ಕಾಸರಗೋಡು ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಪಳ್ಳತ್ತಡ್ಕ ಸೇತುವೆಯ ಒಂದು ಭಾಗದಲ್ಲಿ ರಸ್ತೆ ಹೊಂಡಗಳಿಂದ ತುಂಬಿಕೊಂಡು ಹಲವು ವರ್ಷಗಳಾದರೂ ಇದರ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಚೆರ್ಕಳ-ಉಕ್ಕಿನಡ್ಕ ರೂಟ್ನಲ್ಲಿ 25ರಷ್ಟು ಖಾಸಗಿ ಬಸ್ಗಳು ಪ್ರತಿದಿನ 150ರಷ್ಟು ಟ್ರಿಪ್ಗಳನ್ನು ನಡೆಸುತ್ತಿವೆ. ಮಾತ್ರವಲ್ಲದೆ ಕೆಎಸ್ಆರ್ಟಿಸಿ ಬಸ್ಗಳು ಹಾಗೂ ಇತರ ಹಲವು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ರಸ್ತೆ ಶೋಚನೀಯ ಸ್ಥಿತಿಯಲ್ಲಿರುವುದರಿಂದ ವಾಹನಗಳು ಸಂಚರಿಸುವ ವೇಳೆ ಏಳುತ್ತಿರುವ ಧೂಳು ಪ್ರಯಾಣಿಕರಿಗೆ ಭಾರೀ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಬಸ್ ನೌಕರರಿಗೂ ಆರೋಗ್ಯ ಸಮಸ್ಯೆ ಕಂಡುಬರುತ್ತಿದೆ. ಅಲ್ಲದೆ ರಸ್ತೆಯ ಹೊಂಡಗಳಿಗೆ ಬಿದ್ದುಎದ್ದು ಸಂಚರಿಸಬೇಕಾಗುತ್ತಿರು ವುದರಿಂದ ಬಸ್ಗಳಿಗೆ ನಿರಂತರ ದುರಸ್ತಿ ಕೆಲಸ ಅನಿವಾರ್ಯವಾಗು ತ್ತಿದೆ. ಇದರಿಂದ ಭಾರೀ ಆರ್ಥಿಕ ನಷ್ಟ ಉಂಟಾಗುತ್ತಿದೆ. ಹೊಂಡಗಳಿಂದ ತುಂಬಿಕೊಂಡಿರುವ ರಸ್ತೆಯಲ್ಲಿ ವಾಹನಗಳಿಗೆ ಸಂಚರಿಸಲು ಸಮಸ್ಯೆಯಾಗುವುದರ ಜೊತೆಗೆ ಪಾದಚಾರಿಗಳು ಕೂಡಾ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತಿದೆ. ರಸ್ತೆಯ ದುರಸ್ತಿ ಕಾಮಗಾರಿಗಾಗಿ ಟೆಂಡರ್ ಕ್ರಮ ಪೂರ್ತಿಗೊಳಿಸಿದ್ದರೂ ಇದುವರೆಗೆ ಕೆಲಸ ಆರಂಭಿಸಿಲ್ಲ. ಈ ರಸ್ತೆ ಹಾಗೂ ಸೇತುವೆಯನ್ನು ಶೀಘ್ರ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಸೌಕರ್ಯ ಒದಗಿಸಬೇಕೆಂದು ಬಸ್ ಆಪರೇಟರ್ಸ್ ಫೆಡರೇಶನ್ ಒತ್ತಾಯಿಸಿದೆ. ಇಲ್ಲದಿದ್ದಲ್ಲಿ ಅನಿರ್ಧಿಷ್ಟಾವಧಿ ಕಾಲ ಬಸ್ ಸಂಚಾರ ನಿಲುಗಡೆಗೊಳಿಸಬೇಕಾಗಿ ಬರಲಿದೆಯೆಂದು ಸಂಘಟನೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ತಿಳಿಸಿದೆ. ಶೋಚನೀಯಾ ವಸ್ಥೆಯಲ್ಲಿರುವ ರಸ್ತೆಯನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳದ ಅಧಿಕಾರಿಗಳ ನೀತಿಯನ್ನು ಪ್ರತಿಭಟಿಸಿ ಈ ರೂಟ್ನಲ್ಲಿ ಸಂಚರಿಸುವ ಖಾಸಗಿ ಬಸ್ ನೌಕರರು ನಿನ್ನೆ ಸೂಚನಾ ಮುಷ್ಕರ ನಡೆಸಿದ್ದಾರೆ.







