ಪೈವಳಿಕೆ: ಪಂಚಾಯತ್ನ ಕುರುಡಪದವು- ಲಾಲ್ಭಾಗ್- ಅಮ್ಮೇರಿ ರಸ್ತೆ ಅಭಿವೃದ್ಧಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದು, ಇದರಿಂದ ಸ್ಥಳೀಯರ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಲಾಲ್ಭಾಗ್ನಿಂದ ಅಮ್ಮೇರಿ ತನಕದ ರಸ್ತೆಯನ್ನು ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಂಗವಾಗಿ ಅಲ್ಲಲ್ಲಿ ಮೋರಿಸಂಕ ನಿರ್ಮಿಸಬೇಕಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರ ಎರಡು ತಿಂಗಳು ಕಾಲ ನಿಷೇಧಿಸಲಾಗಿದೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಹೆಚ್ಚು ದಿನ ಈ ರಸ್ತೆ ಮೂಲಕ ಸಂಚಾರ ನಿಷೇಧಿಸಬೇಕಾದ ಸ್ಥಿತಿ ನಿರ್ಮಾಣವಾಗಬಹುದಾಗಿದ್ದು, ಇದು ಸ್ಥಳೀಯರ ಸಂಚಾರಕ್ಕೆ ಸಮಸ್ಯೆ ಉಂಟುಮಾಡಲಿದೆ ಎಂದು ಆತಂಕ ಪಡಲಾಗಿದೆ.
ಉಪ್ಪಳದಿಂದ ಕುರುಡಪದವುಗೆ ತೆರಳುವ ಬಸ್ಸಹಿತ ವಾಹನಗಳು ಬಾಯಾರ್ಪದವುನಿಂದ ಒಳ ರಸ್ತೆಯಾಗಿ ಅಮ್ಮೇರಿಗೆ ಸುತ್ತಾಗಿ ತಲುಪಬೇಕಾಗುತ್ತಿದೆ. ಇದು ಚಿಪ್ಪಾರು, ಖಂಡಿಗೆ, ಕಡೆಂಗೋಡಿ ಭಾಗದ ಜನರಿಗೆ ಸಂಕಷ್ಟ ತಂದಿತ್ತಿದೆ. ಕಾಮಗಾರಿ ಆದಷ್ಟು ಬೇಗನೆ ಮುಗಿಸಿ ರಸ್ತೆಯನ್ನು ಸಂಚಾರಕ್ಕೆ ತೆರೆದುಕೊಡಲು ಕ್ರಮ ಕೈಗೊಳ್ಳಬೇಕೆಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಲ್ಲಿ ಸ್ಥಳೀಯರು ಆಗ್ರಹಿಸಿದ್ದಾರೆ. ಇದೇ ವೇಳೆ ಉಪ್ಪಳ ಹಾಗೂ ವಿಟ್ಲಕ್ಕೆ ತೆರಳುವ ಬಸ್ಗಳು ಖಂಡಿಗೆ ತನಕ ಸಂಚರಿಸಬೇಕೆಂದು ಊರವರು ಆಗ್ರಹಿಸಿದ್ದಾರೆ.







