ಕಾಸರಗೋಡು: ಬಾವಿಗೆ ಬಿದ್ದ ತೆಂಗಿನಕಾಯಿಗಳನ್ನು ತೆಗೆಯಲೆಂದು ಬಾವಿಗಿಳಿದು ಸಿಲುಕಿಕೊಂಡ ವ್ಯಕ್ತಿಯನ್ನು ಕಾಸರಗೋಡು ಅಗ್ನಿಶಾಮಕದಳ ರಕ್ಷಿಸಿದೆ. ತೆಂಗಿನಕಾಯಿಗಳನ್ನು ಸಂಗ್ರಹಿಸಿದ ಬಳಿಕ ಮೇಲೆ ಹತ್ತಲು ಯತ್ನಿಸುತ್ತಿದ್ದ ಮಧ್ಯೆ ಪ್ಲಾಸ್ಟಿಕ್ ಹಗ್ಗ ಜಾರಿ ಕೈತಪ್ಪಿ ಬಾವಿಗೆ ಬಿದ್ದ ಕಲ್ಲಿಕೋಟೆ ನರಿಕೂನಿ ನಿವಾಸಿ ಹಾಗೂ ಕುಂಬಳೆಯಲ್ಲಿ ವಾಸವಾಗಿರುವ ಶಬೀರ್ (39)ನನ್ನು ಅಗ್ನಿಶಾಮಕದಳ ಮೇಲೆತ್ತಿ ಪಾರು ಮಾಡಿದೆ. ನುಳ್ಳಿಪ್ಪಾಡಿಯ ರಾಜೇಂದ್ರ ಎಂಬವರ ಮನೆ ಹಿತ್ತಿಲಿನ ವಾಲಿಕೊಂಡಿದ್ದ ತೆಂಗನ್ನು ತಂತಿ ಉಪಯೋಗಿಸಿ ಎಳೆದು ಕಟ್ಟಲು ಇವರು ತಲುಪಿದ್ದರು. ಕೆಲಸದ ಮಧ್ಯೆ ಬಾವಿಗೆ ಬಿದ್ದ ತೆಂಗಿನಕಾಯಿಗಳನ್ನು ತೆಗೆಯಲೆಂದು ಇಳಿದಿದ್ದರು.
50 ಅಡಿ ಆಳ ಹಾಗೂ 10 ಅಡಿಯಷ್ಟು ನೀರಿರುವ, ಸುತ್ತು ಆವರಣವಿರುವ ಬಾವಿಯಲ್ಲಿ ಸಿಲುಕಿಕೊಂಡರು. ಮನೆಮಂದಿ ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅವರು ತಲುಪಿ ವ್ಯಕ್ತಿಯನ್ನು ಮೇಲಕ್ಕೆತ್ತಿದ್ದಾರೆ. ತಂಡದಲ್ಲಿ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್, ವಿ.ಎಸ್. ಗೋಕುಲ್ಕೃಷ್ಣನ್, ಕೆ.ಆರ್. ಅಜೇಶ್, ಎಸ್. ಸಾದಿಕ್, ಪಿ.ಎನ್. ನೌಫಲ್, ಎಸ್. ಸೋಬಿನ್, ಪಿ.ವಿ. ಪ್ರಸಾದ್ ಕಾರ್ಯಾಚರಣೆ ನಡೆಸಿದ್ದರು. ಶಬೀರ್ನ ಕೈಗಳಿಗೆ ಗಾಯ ಉಂಟಾಗಿದೆ.







