ಕಾಸರಗೋಡು: ಬೈಕ್ನಲ್ಲಿ ಮಾದಕದ್ರವ್ಯವಾದ 51 ಗ್ರಾಂ ಎಂಡಿಎಂಎ ಸಾಗಿಸಿದ ಪ್ರಕರಣದ ಆರೋಪಿ ಕಾಸರಗೋಡು ಹೆಚ್ಚುವರಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮು ರಮೇಶ್ಚಂದ್ರ ಬಾನು ಅವರು ೧೦ ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮಂಜೇಶ್ವರ ಕುಬಣೂರು ಕಾನಾ ವೀಟಿಲ್ನ ಮೊಹಮ್ಮದ್ ಸಮೀರ್ (43) ಶಿಕ್ಷೆಗೊಳಗಾದ ಆರೋಪಿ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ೬ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
೨೦೨೧ ಅಕ್ಟೋಬರ್ ೪ರಂದು ಬೆಳಿಗ್ಗೆ ಮಂಜೇಶ್ವರ ಕಯ್ಯಾರು ಕೈಕಂಬ- ಬಾಯಿಕಟ್ಟೆ ರಸ್ತೆಯಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬೈಕ್ನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಆರೋಪಿಯನ್ನು ಬಂಧಿಸಲಾಗಿತ್ತು. ಕಾಸರಗೋಡು ಎಕ್ಸೈಸ್ ಎನ್ಫೋರ್ಸ್ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ನ ಸರ್ಕಲ್ ಇನ್ಸ್ಪೆಕ್ಟರ್ ಜೋಯ್ ಜೋಸೆಫ್ರ ನೇತೃತ್ವದಲ್ಲಿ ಪ್ರಿವೆಂಟಿವ್ ಆಫೀಸರ್ಗಳಾದ ಸಂತೋಷ್ ಕುಮಾರ್ ವಿ, ಬಿಜೋಯ್ ಇ.ಕೆ, ಸುಧೀಂದ್ರನ್ ಎಂ.ವಿ, ಸಾಜನ್ ಅಪ್ಯಾಲ್, ನಿಶಾದ್ ಪಿ. ನಾಯರ್, ಮಂಜುನಾಥನ್ ವಿ, ಮನೋಜ್ ಪಿ, ಮೋಹನ್ ಕುಮಾರ್ ಎಲ್ ಮತ್ತು ಶೈಲೇಶ್ ಕುಮಾರ್ ಪಿ. ಎಂಬವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿತ್ತು. ನಂತರ ಈ ಪ್ರಕರಣದ ಬಗ್ಗೆ ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಕಮಿಷನರ್ ಎಸ್. ಕೃಷ್ಣ ಕುಮಾರ್ ಈ ಪ್ರಕರಣದ ಬಗ್ಗೆ ಮುಂದಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾ ರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಚಂದ್ರಮೋಹನನ್ ಜಿ. ಮತ್ತು ನ್ಯಾಯ ವಾದಿ ಚಿತ್ರಕಲಾ ಎಂ. ಎಂಬವರು ನ್ಯಾಯಾಲಯದಲ್ಲಿ ವಾದಿಸಿದ್ದರು.






