ತಿರುವನಂತಪುರ: ಕಾಸರಗೋಡು-ಮಂಗಳೂರು ಮಧ್ಯೆ ಸಂಚಾರ ನಡೆಸುವ ಕರ್ನಾಟಕ ರಾಜ್ಯ ಸಾರಿಗೆ ಬಸ್ನಲ್ಲಿ ಪ್ರಯಾಣ ದರವನ್ನು ದಿಢೀರ್ ಹೆಚ್ಚಿಸಿರುವ ಕರ್ನಾಟಕ ಸರಕಾರದ ಕ್ರಮದ ಬಗ್ಗೆ ರಾಜ್ಯ ಸರಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಕೇರಳ ರಾಜ್ಯ ಸಾರಿಗೆ ಸಚಿವ ಗಣೇಶ್ ಕುಮಾರ್ಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕದ ಆರ್ಡಿನರಿ ಸಾರಿಗೆ ಬಸ್ಗಳಲ್ಲಿ 7 ರೂಪಾಯಿ, ರಾಜಹಂಸ ಬಸ್ನಲ್ಲಿ 10 ರೂಪಾಯಿ ಹೆಚ್ಚಿಸಲಾಗಿದೆ. ಕರ್ನಾಟಕದ 42 ಬಸ್ಗಳು ಆರಿಕ್ಕಾಡಿ ಟೋಲ್ ಪ್ಲಾಸಾ ಮೂಲಕ ಸಂಚರಿಸುತ್ತಿವೆ. ಕಾಸರಗೋಡಿನಿಂದ ಮಂಗಳೂರಿಗೆ 81 ರೂಪಾಯಿ ಪ್ರಯಾಣದರವಾಗಿದ್ದುದನ್ನು ಈಗ ೮೮ ರೂಪಾಯಿಗೆ ಹೆಚ್ಚಿಸಲಾಗಿದೆ. ಇದೇ ವೇಳೆ ಕೇರಳ ರಾಜ್ಯ ಸಾರಿಗೆ ಬಸ್ಗಳಲ್ಲಿ ಪ್ರಯಾಣ ದರವನ್ನು ಪ್ರಸ್ತುತ ಹೆಚ್ಚಿಸಿಲ್ಲ. ಆದ್ದರಿಂದ ಕೇರಳ ಬಸ್ಗಳಲ್ಲೂ ದರ ಹೆಚ್ಚಳವಾಗದಂತೆ ಸಚಿವರು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಶಾಸಕ ಆಗ್ರಹಪಟ್ಟಿದ್ದಾರೆ. ಕರ್ನಾಟಕ ಟ್ರಾನ್ಸ್ ಪೋರ್ಟ್ ಕಾರ್ಪೋರೇಶನ್ ಒಮ್ಮೆಲೇ 7ರಿಂದ 10 ರೂಪಾಯಿವರೆಗೆ ಹೆಚ್ಚಿಸಿರುವು ದರಿಂದ ಪ್ರಯಾಣಿಕರಿಗೆ ಭಾರೀ ದೊಡ್ಡ ಹೊಡೆತವುಂಟಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರನ್ನು ನೇರವಾಗಿ ಭೇಟಿಯಾಗಿ ಈ ವಿಷಯಕ್ಕೆ ಸಂಬಂಧಿಸಿ ಮನವಿ ಸಲ್ಲಿಸಿರುವುದಾಗಿ ಶಾಸಕ ಎಕೆಎಂ ಆಶ್ರಫ್ ತಿಳಿಸಿದ್ದಾರೆ.







