ಕಾಸರಗೋಡು: ಕಾಸರಗೋಡು ಅಭಿವೃದ್ಧಿಗೆ ಹೆಚ್ಚು ಸಾಧ್ಯತೆಯುಳ್ಳ ಜಿಲ್ಲೆಯಾಗಿದೆ. ಆದ್ದರಿಂದ ಭಾರೀ ಸಂತೋಷ ಹಾಗೂ ನಿರೀಕ್ಷೆಯೊಂದಿಗೆ ತಾನು ಜಿಲ್ಲಾಧಿಕಾರಿಯಾಗಿ ಇಲ್ಲಿ ಅಧಿಕಾರ ವಹಿಸುತ್ತಿದ್ದೇನೆಂದು ನೂತನ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನುಡಿದಿದ್ದಾರೆ. ಇಂದು ಬೆಳಿಗ್ಗೆ ಕಾಸರಗೋಡು ಸಿವಿಲ್ ಸ್ಟೇಶನ್ನ ಛೇಂಬರ್ಗೆ ತಲುಪಿದ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡು ತ್ತಿದ್ದರು. ಕಾಸರಗೋಡಿನಲ್ಲಿ ಅಭಿವೃದ್ಧಿಗೆ ಹಲವು ಅವಕಾಶಗಳಿವೆ. ಅವುಗಳನ್ನೆಲ್ಲಾ ತಿಳಿದುಕೊಂಡು ಎಲ್ಲರ ಅಭಿಪ್ರಾಯ ಕೇಳಿದ ಬಳಿಕ ಯೋಜನೆ ಸಿದ್ಧಪಡಿಸಲಾಗುವುದು. ಜಿಲ್ಲೆಯ ಜನರ ಪಟ್ಟೆ ಸಹಿತ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸಲಾಗುವುದು. ಈ ಹಿಂದಿನ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಆರಂಭಿಸಿದ ಯೋಜನೆಗಳನ್ನು ಮುಂದುವರಿಸಲಾಗುವುದೆಂದೂ ಅವರು ತಿಳಿಸಿದರು. ಎಡಿಎಂ, ಜಿಲ್ಲಾ ಮಟ್ಟದ ಅಧಿಕಾರಿಗಳು, ನೌಕರರು ನೂತನ ಜಿಲ್ಲಾಧಿಕಾರಿಗೆ ಸ್ವಾಗತ ನೀಡಿದರು.ನಿವೃತ್ತ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ನೂತನ ಜಿಲ್ಲಾಧಿಕಾ ರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.






