ಕಾಸರಗೋಡು: ವಂದೇ ಮಾತರಂ ರಾಷ್ಟ್ರೀಯ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲವೆಂದು ಹೇಳುವ ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ನೇತೃತ್ವದ ಸರಕಾರದ ನಿಲುವು ದೇಶದ ಐಕ್ಯತೆಗೆ ಬೆದರಿಕೆಯಾಗಿದೆ. ಮಾತ್ರವಲ್ಲದೆ ಇದು ಮುಂದಿನ ವಿಭಜನೆಗೆ ಬೀಜ ಬಿತ್ತುವಂತದ್ದಾಗಿದೆಯೆಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇಂದು ಬೆಳಿಗ್ಗೆ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಭಾರತವನ್ನು ಇಬ್ಬಾಗವಾಗಿ ಹಾಗೂ ಹದಿನೇಳಾಗಿ ವಿಭಜಿಸಬೇಕೆಂದು ಆಗ್ರಹಿಸಿದ್ದ ಮುಸ್ಲಿಂ ಲೀಗ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ವಂದೇ ಮಾತರಂನ್ನು ವಿರೋಧಿಸುವ ನಿಲುವು ತಳೆದಿರುವು ದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ದೊಡ್ಡ ಪರಂಪರೆಯನ್ನು ಹೊಂದಿರುವ ಕಾಂಗ್ರೆಸ್ ಈಗ ಮುಸ್ಲಿಂ ಲೀಗ್ಗೆ ಸಂಪೂರ್ಣವಾಗಿ ಶರಣಾಗಿರುವುದು ಅತ್ಯಂತ ಅಪಾಯಕಾರಿ. ವಿದ್ಯಾರ್ಥಿಗಳ ಹಕ್ಕುಗಳು ಮತ್ತು ಹೋರಾಟಗಳನ್ನು ಬೆಂಬಲಿಸುತ್ತೇವೆ ಎಂಬ ಇಂಡಿ ಮೈತ್ರಿಕೂಟದ ಹೇಳಿಕೆ ಬೂಟಾಟಿಕೆಯಿಂದ ಕೂಡಿದೆಯೆಂ ಬುವುದು ಝಾರ್ಖಂಡ್ ಹೋರಾಟ ಹಾಗೂ ಕೇರಳ ರಾಜ್ಯ ಸಚಿವಾಲಯದ ಎದುರು ನಡೆಯುತ್ತಿರುವ ಹೋರಾಟದ ಕುರಿತು ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ನಾಯಕತ್ವದ ನಿಲುವಿನಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ಕೇರಳದ ವಿವಿಧ ಪಿಎಸ್ಸಿ ರ್ಯಾಂಕ್ ಹೋಲ್ಡರ್ಗಳು ನಡೆಸುತ್ತಿರುವ ಹೋರಾಟಗಳ ಕುರಿತು ಅವರೊಂದಿಗೆ ಮಾತುಕತೆ ನಡೆಸಲು ಕೂಡಾ ಕೇರಳ ಮುಖ್ಯಮಂತ್ರಿ ಸಿದ್ಧರಿಲ್ಲ. ಅನೇಕ ಗಂಭೀರ ಆರೋಪಗಳು ಕೇಳಿಬಂದರೂ ಪಿಎಸ್ಸಿಯನ್ನು ತನಿಖೆಗೊಳಪಡಿಸಲು ರಾಜ್ಯಸರಕಾರ ಸಿದ್ಧವಾಗದಿರುವುದು ಯುವಕರ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳ ವಿಷಯದಲ್ಲಿ ಎರಡೂ ರಂಗಗಳು ಬೇರೆಬೇರೆಯಲ್ಲ ಎಂಬುದನ್ನು ತೋರಿಸುತ್ತದೆ ಎಂದು ಕೃಷ್ಣದಾಸ್ ಆರೋಪಿಸಿದರು. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಶಾಸಕರ ನಿಧಿ ಬಳಕೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಬದಲಿಗೆ ಮುಂದಿನ ಲೋಕಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಲಾಗಿದೆ ಯೆಂದೂ ಅವರು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್, ಉಪಾಧ್ಯಕ್ಷ ಪಿ. ರಮೇಶ್ ಉಪಸ್ಥಿತರಿದ್ದರು.






