ಪಂಚಾಯತ್ ಅಧ್ಯಕ್ಷ ಸ್ಥಾನ: ಕುಂಬಳೆಯಲ್ಲಿ ಮೊದಲು ಅಬ್ದುಲ್ ಖಾದರ್, ಮಂಗಲ್ಪಾಡಿಯಲ್ಲಿ ಗೋಲ್ಡನ್ ರಹ್ಮಾನ್, ಮಂಜೇಶ್ವರದಲ್ಲಿ ಬಷೀರ್ ಕನಿಲ

ಕುಂಬಳೆ: ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ಮುಸ್ಲಿಂಲೀಗ್‌ನಲ್ಲಿ ಒಪ್ಪಂದಕ್ಕೆ ಬರಲಾಗಿದೆ. ಮುಸ್ಲಿಂಲೀಗ್‌ಗೆ ಬಹುಮತವುಳ್ಳ ಪಂಚಾಯತ್‌ಗಳಲ್ಲಿ ಮೊದಲ ಎರಡು ವರ್ಷ ಒಬ್ಬರು, ಅನಂತರದ ಮೂರು ವರ್ಷ ಇನ್ನೊಬ್ಬರು ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಈ ನಿರ್ಧಾರ ಕೈಗೊಳ್ಳುವುದರೊಂದಿಗೆ ಎಲ್ಲರನ್ನು ಸಮಾಧಾನಪಡಿಸಲು ಪಕ್ಷಕ್ಕೆ ಸಾಧ್ಯವಾಗಿದೆ. ನಿರ್ಧಾರ ಪ್ರಕಾರ ಕುಂಬಳೆಯಲ್ಲಿ ಮೊದಲ ಎರಡು ವರ್ಷ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷರಾಗುವರು. ಅನಂತರದ ಮೂರು ವರ್ಷ ಎ.ಕೆ. ಹರೀಫ್ ಆ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಲೀಗ್ ಜಿಲ್ಲಾ ಪಾರ್ಲಿಮೆಂಟರಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿವಿಧ ಪಂಚಾಯತ್‌ಗಳಲ್ಲೂ, ಬ್ಲೋಕ್ ಪಂಚಾಯತ್‌ಗಳಲ್ಲೂ ಒಬ್ಬರಿಗಿಂತ ಹೆಚ್ಚು ಮಂದಿ ಅಧ್ಯಕ್ಷ ಸ್ಥಾನಕ್ಕೆ ಹಕ್ಕು ಮಂಡಿಸುವುದರೊಂದಿಗೆ ತಲಾ ಎರಡೂವರೆ ವರ್ಷ ಎಂಬ ಸೂತ್ರವನ್ನು ಪಕ್ಷ ಮುಂದಿರಿಸಿತ್ತು. ಆದರೆ ಬಳಿಕ ಮೊದಲು ಎರಡು ವರ್ಷ, ಅನಂತರ ಮೂರು ವರ್ಷವಾಗಿ ನಿರ್ಧಾರ ಕೈಗೊಳ್ಳಲಾಯಿತು.

ಮಂಜೇಶ್ವರ ಮಂಡಲದ ಎಂಟು ಪಂಚಾಯತ್‌ಗಳಲ್ಲಿ ಚುನಾವಣೆ ಚಟುವಟಿಕೆಗಳಿಗೆ ಸಂಬಂಧಿಸಿ ತಂತ್ರಗಳನ್ನು ಆವಿಷ್ಕಾರಿಸಿ ಯುಡಿಎಫ್‌ಗೆ ಗೆಲುವು ದೊರಕಿಸಿಕೊಡಲು ಅಧ್ಯಕ್ಷ ಅಸೀಸ್ ಮರಿಕ್ಕೆ ಹಾಗೂ ಪ್ರಧಾನ ಕಾರ್ಯದರ್ಶಿ ಎ.ಕೆ. ಆರಿಫ್ ನೇತೃತ್ವದ ಸಮಿತಿಗೆ ಸಾಧ್ಯವಾಯಿತೆಂದು ರಾಜ್ಯ ಲೀಗ್ ನಾಯಕತ್ವ ತಿಳಿಸಿ ಅವರನ್ನು ಅಭಿನಂದಿಸಿದೆ. ಕೆಲವೇ ತಿಂಗಳೊಳಗೆ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಅದರ ಚಟುವಟಿಕೆಗಳನ್ನು ತ್ವರಿತಗೊಳಿಸಲು ಅಸೀಸ್ ಮರಿಕ್ಕೆ, ಎ.ಕೆ. ಆರಿಫ್‌ರ ಸೇವೆ ಅತ್ಯಗತ್ಯವಾಗಿದೆಯೆಂದು ತಿಳಿದು ಕೊಂಡ ಹಿನ್ನೆಲೆಯಲ್ಲಿ ಎ.ಕೆ. ಆರಿಫ್‌ರನ್ನು ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲಾಗಿದೆ. ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ಮೊದಲ ಎರಡು ವರ್ಷ ಸೈಫುಲ್ಲ ತಂಙಳ್ ಅಧ್ಯಕ್ಷರಾಗಲಿ ದ್ದಾರೆ. ಅನಂತರದ ಮೂರು ವರ್ಷ ಅಸೀಸ್ ಮರಿಕ್ಕೆ ಅಧ್ಯಕ್ಷರಾಗುವರು. ಮಂಗಲ್ಪಾಡಿ ಪಂಚಾಯತ್‌ನಲ್ಲಿ ಮೊದಲ ಎರಡು ವರ್ಷ ರಹ್ಮಾನ್ ಗೋಲ್ಡನ್, ಅನಂತರದ ಮೂರು ವರ್ಷ ಪಿ.ಎಂ. ಸಲೀಂ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವರು. ಮಂಜೇಶ್ವರ ಪಂಚಾಯತ್‌ನಲ್ಲಿ ಮೊದಲ ಹಂತದಲ್ಲಿ ಬಷೀರ್ ಕನಿಲ, ಅನಂತರ ಎ. ಮುಕ್ತಾರ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.

RELATED NEWS

You cannot copy contents of this page