ಕಾಸರಗೋಡು: ಪೆರಿಯ ವಡಕ್ಕೇಕರೆ ನಡುವಿಲ್ ವೀಟಿಲ್ ನಿವಾಸಿ ಪುರುಷೋತ್ತಮನ್ (64) ಬಾವಿಗೆ ಬಿದ್ದು ಮೃತಪಟ್ಟರು. ನೀರು ಸೇದುತ್ತಿದ್ದ ಮಧ್ಯೆ ಆಯ ತಪ್ಪಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಇಂದು ಬೆಳಿಗ್ಗೆ ಘಟನೆ ನಡೆದಿದೆ. ಮನೆಯ ಸಮೀಪದಲ್ಲಿರುವ ತರವಾಡು ಮನೆಗೆ ನೀರು ಕೊಂಡೊಯ್ಯಲೆಂದು ತೆರಳಿದ್ದರು. ಒಂದು ಬಕೆಟ್ ನೀರು ಮನೆಗೆ ತಲುಪಿಸಿದ ಬಳಿಕ ಮತ್ತೆ ಹಿಂತಿರುಗದ ಹಿನ್ನೆಲೆಯಲ್ಲಿ ನೋಡಿದಾಗ ಹಗ್ಗ ಹಾಗೂ ಬಕೆಟ್ ಬಾವಿಯಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಂಕೆ ತೋರಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ತಲುಪಿ ನಡೆಸಿದ ತಪಾಸಣೆಯಲ್ಲಿ ಮೃತದೇಹವನ್ನು ಪತ್ತೆಹಚ್ಚಿ ಮೇಲೆತ್ತಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ಕೊಂಡೊಯ್ಯಲಾಗಿದೆ. ಪಾರಲಲ್ ಕಾಲೇಜ್ ಅಧ್ಯಾಪಕನಾಗಿದ್ದ ಪುರುಷೋತ್ತಮನ್ ಸಕ್ರಿಯ ಆರ್ಎಸ್ಎಸ್ ಕಾರ್ಯಕರ್ತ ಹಾಗೂ ಉತ್ತಮ ಕೃಷಿಕನಾಗಿದ್ದರು. ಮೃತರು ಪತ್ನಿ ಶೋಭ, ಮಕ್ಕಳಾದ ಸಚಿನ್ಕೃಷ್ಣ, ಶ್ವೇತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






