ಕಾಸರಗೋಡು: ರಸ್ತೆಯಲ್ಲಿ ಕಡಿದು ಬಿದ್ದಿದ ವಿದ್ಯುತ್ ಸರ್ವೀಸ್ ವಯರ್ ಕುತ್ತಿಗೆಗೆ ಸಿಲುಕಿದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ಚರಂಡಿಗೆ ಬಿದ್ದು ಬೈಕ್ವಲ್ಲಿದ್ದ ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ಸೂರ್ಲಿನಲ್ಲಿ ನಿನ್ನೆ ನಡೆದಿದೆ.
ಪರವನಡ್ಕ ತಲಕ್ಲಾಯಿ ನಿವಾಸಿ ವಿನಯಪ್ರಸಾದ್ (22) ಮತ್ತು ಕೈಂದಾರಿನ ಮಿಥುನ್ (23) ಎಂಬವರು ಗಾಯಗೊಂಡ ಯುವಕರಾಗಿದ್ದಾರೆ. ಮಧೂರು ರಸ್ತೆಯ ಸೂರ್ಲುನಲ್ಲಿ ರಸ್ತೆಗೆ ಅಡ್ಡವಾಗಿ ಜೋತು ಬಿದ್ದಿದ್ದ ವಿದ್ಯುತ್ ಕಂಬದ ಸರ್ವೀಸ್ ತಂತಿ ಲಾರಿಯೊಂದಕ್ಕೆ ಸಿಲುಕಿ ತುಂಡಾಗಿ ಬಿದ್ದಿತ್ತು. ಅನಂತರ ವಿನಯಪ್ರಸಾದ್ ಮತ್ತು ಮಿಥುನ್ ನಿನ್ನೆ ಬೆಳಿಗ್ಗೆ 10ಗಂಟೆ ವೇಳೆ ಬೈಕ್ನಲ್ಲಿ ಕಾಸರಗೋಡಿನಿಂದ ಮಧೂರಿನತ್ತ ಸಂಚರಿಸಿದ್ದು, ಈ ವೇಳೆ ತಂತಿ ಅವರ ಕುತ್ತಿಗೆಗೆ ಸಿಲುಕಿತ್ತು. ಇದರಿಂದ ನಿಯಂತ್ರಣ ತಪ್ಪಿ ಬೈಕ್ ಪಕ್ಕದ ಚರಂಡಿಗೆ ಬಿದ್ದಿದೆ. ನಾಗರಿಕರು ಗಾಯಾಳುಗಳನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಆದರೆ ಗಂಭೀರ ಗಾಯಗೊಂಡಿರುವು ದರಿಂದ ನಂತರ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವಿದ್ಯುನ್ಮಂಡಳಿ ನೌಕರರು ಆಗಮಿಸಿ ತುಂಡಾಗಿ ಬಿದ್ದ ಸರ್ವೀಸ್ ವಯರನ್ನು ತೆರವುಗೊಳಿಸಿದರು. ರಸ್ತೆಗೆ ಅಡ್ಡವಾಗಿ ಜೋತುಬಿದ್ದಿದ್ದ ವಯರ್ ಸರಕು ಲಾರಿಯ ಎದುರು ಸಿಲುಕಿ ತುಂಡಾಗಿ ಬಿದ್ದ ಘಟನೆ ಈ ಹಿಂದೆಯೂ ನಡೆದಿದೆಯೆಂದು ಊರವರು ಹೇಳುತ್ತಿದ್ದಾರೆ.




