ಶಬರಿಮಲೆ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆ ಒಂದೆಡೆ ತೀವ್ರಗತಿಯಲ್ಲಿ ಸಾಗುತ್ತಿರುವ ವೇಳೆಯಲ್ಲಿ ಇದೇ ದೇಗುಲದ ಹಳೆ ಧ್ವಜ ಸ್ತಂಭ ಬದಲಿಸುವ ವೇಳೆ ಅದರಲ್ಲಿದ್ದ ಚಿನ್ನ ಲೇಪಿತ ಪಂಚಲೋಹ ವಿಗ್ರಹದ ವಾಜೀವಾಹನ ಮತ್ತು ಇತರ ಮೂರ್ತಿಗಳ ಬಗ್ಗೆಯೂ ವಿಶೇಷ ತನಿಖಾ ತಂಡ ಇನ್ನೊಂದೆಡೆ ತನಿಖೆ ಆರಂಭಿಸಿದ್ದು, ಇದು ಶಬರಿಮಲೆ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ಶಬರಿಮಲೆ ದೇಗುಲದ ಹಳೆ ಧ್ವಜಸ್ತಂಭವನ್ನು ಪ್ರಯಾರ್ ಗೋಪಾಲಕೃಷ್ಣ ಅಧ್ಯಕ್ಷರಾಗಿದ್ದ ದೇವಸ್ವಂ ಮಂಡಳಿಯ ನೇತೃತ್ವದಲ್ಲಿ 2017ರಲ್ಲಿ ಬದಲಾಯಿಸಿ ಹೊಸ ಧ್ವಜಸ್ತಂಭ ಸ್ಥಾಪಿಸಲಾಗಿತ್ತು. ಹಳೆ ಧ್ವಜಸ್ತಂಭ ಶಿಥಿಲಾವಸ್ಥೆಗೆ ತಲುಪಿದ ಹಿನ್ನೆಲೆಯಲ್ಲಿ ಅದನ್ನು ಬದಲಿಸಿ ಹೊಸ ಧ್ವಜಸ್ತಂಭ ಸ್ಥಾಪಿಸಲಾಗಿತ್ತು. ಹಳೆ ಧಜಸ್ತಂಭದಲ್ಲಿದ್ದ 15 ಕಿಲೋ ತೂಕದ ಚಿನ್ನ ಲೇಪಿತ ಪಂಚಲೋಹದ ವಾಜೀ ವಾಹನ ಮತ್ತು ಅಷ್ಟದಿಕ್ಪಾಲಕ ಮೂರ್ತಿ ಒಳಗೊಂಡಿತ್ತು. ಇದು ರಾಜಾಡಳಿತ ಕಾಲದಲ್ಲಿ ಶಬರಿಮಲೆಗೆ ಬಹುಮಾನ ರೂಪದಲ್ಲಿ ನೀಡಿದ ವಸ್ತುಗಳಾಗಿತ್ತೆಂದು ದೇಗುಲದ ಇತಿಹಾಸ ಪುಟದಲ್ಲಿ ದಾಖಲಿಸಲಾಗಿದೆ. ಹೀಗೆ ಹಳೆ ಧ್ವಜಸ್ತಂಭ ಬದಲಿಸುವ ವೇಳೆ ಅದರಲ್ಲಿದ್ದ ವಾಜೀವಾಹನವನ್ನು ಕ್ಷೇತ್ರ ತಂತ್ರಿವರ್ಯರಿಗೆ ಹಸ್ತಾಂತರಿಸಲಾಗಿತ್ತು. ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ತಂತ್ರಿವರ್ಯ ಕಂಠರರ್ ರಾಜೀವರ್ ಎಸ್ಐಟಿಗೆ ನೀಡಿದ ಹೇಳಿಕೆಯಲ್ಲೂ ಈ ವಿಷಯ ತಿಳಿಸಿದ್ದರು.
ಅದರಂತೆ ಎಸ್ಐಟಿ ತಂತ್ರಿಗಳ ನಿವಾಸಕ್ಕೆ ದಾಳಿ ನಡೆಸಿ ಅಲ್ಲಿಂದ ವಾಜೀ ವಾಹನ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಆದರೆ ಹಳೆ ಧ್ವಜಸ್ತಂಭದಲ್ಲಿದ್ದ ಅಷ್ಟ ದಿಕ್ಪಾಲಕ ಮೂರ್ತಿಗಳನ್ನು ಪತ್ತೆಹಚ್ಚಲು ಈತನಕ ಸಾಧ್ಯವಾಗಿಲ್ಲ. ಆ ಬಗ್ಗೆ ಹೈಕೋರ್ಟ್ ನೀಡಿದ ನಿರ್ದೇಶ ಪ್ರಕಾರ ಎಸ್ಐಟಿ ಮತ್ತು ದೇವಸ್ವಂ ವಿಜಿಲೆನ್ಸ್ ಮಂಡಳಿಯೂ ಈಗ ತನಿಖೆ ಆರಂಭಿಸಿದೆ.







