ಕುಂಬಳೆ: ಆಹಾರ ಸೇವಿಸುತ್ತಿದ್ದ ವೇಳೆ ಕುಸಿದುಬಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪ್ರಥಮ ವರ್ಷ ಪದವಿ ವಿದ್ಯಾರ್ಥಿ ಮೃತಪಟ್ಟನು.
ಕುಂಬಳೆ ಕುಂಟಂಗೇರಡ್ಕದ ಅಬ್ದುಲ್ಲ ಎಂಬವರ ಪುತ್ರ ಮುಬಾರಿಸ್ (18) ಮೃತಪಟ್ಟ ದುರ್ದೈವಿ. ಶನಿವಾರ ರಾತ್ರಿ ಮನೆಯಲ್ಲಿ ಆಹಾರ ಸೇವಿಸುತ್ತಿದ್ದಾಗ ಮುಬಾರಿಸ್ ಕುಸಿದುಬಿದ್ದಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಯಿತು. ಅಲ್ಲಿ ವೈದ್ಯರು ನಡೆಸಿದ ತಪಾಸಣೆ ವೇಳೆ ಗಂಭೀರ ಸ್ಥಿತಿಯಲ್ಲಿರುವುದಾಗಿ ತಿಳಿದುಬಂತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನ ಸಂಭವಿಸಿದೆ.
ಮಂಗಳೂರು ಶ್ರೀ ಶಾರದಾ ಕಾಲೇಜಿನ ಪ್ರಥಮ ವರ್ಷ ಪದವಿ ವಿದ್ಯಾರ್ಥಿಯಾದ ಮುಬಾರಿಸ್ ಎಂಎಸ್ಎಫ್ ಕುಂಬಳೆ ವಲಯ ಸಮಿತಿ ಸದಸ್ಯನಾಗಿದ್ದರು.ಮೃತರು ತಂದೆ, ತಾಯಿ ಆಯಿಶ, ಸಹೋದರರಾದ ಮನಾಸ್, ಮಿರ್ಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






