ಬದಿಯಡ್ಕ: ಲಾರಿಯಿಂದ ಮರ ಇಳಿಸುತ್ತಿದ್ದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬದಿಯಡ್ಕ ಮೂಕಂಪಾರೆಯ ಹೋಟೆಲ್ ಕಾರ್ಮಿಕನೂ, ಅಸ್ಸಾಂನ ಜೋಗಿಕೋಪ ನಿವಾಸಿಯಾದ ಚಮತ್ ಅಲಿ ಎಂಬವರ ಪುತ್ರ ಅಲಿ ಅಕ್ಬರ್ (32) ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ 12 ಗಂಟೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಮರದ ದಿಮ್ಮಿಗಳನ್ನು ಲಾರಿಯಲ್ಲಿ ಮಿಲ್ಲಿಗೆ ತಲುಪಿಸಲಾಗಿತ್ತು. ಲಾರಿಯಿಂದ ಮರಗಳನ್ನು ರಸ್ತೆ ಬದಿ ಇಳಿಸುತ್ತಿದ್ದಾಗ ಟಾರ್ಚ್ನಿಂದ ಬೆಳಕು ಹಾಯಿಸ ಲೆಂದು ಹೋಟೆಲ್ ಕಾರ್ಮಿಕನಾದ ಅಲಿ ಅಕ್ಬರ್ ಅಲ್ಲಿಗೆ ತಲುಪಿದ್ದರು. ಲಾರಿಯಲ್ಲಿದ್ದವರು ದೂರ ಸರಿಯುವಂತೆ ತಿಳಿಸಿದ್ದರೂ ಇವರ ಭಾಷೆ ಅರ್ಥವಾಗದುದರಿಂದ ಅಲಿ ಅಕ್ಬರ್ ಅಲ್ಲೇ ನಿಂತಿದ್ದರೆನ್ನಲಾಗಿದೆ. ಈ ವೇಳೆ ಮರ ಅವರ ದೇಹದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಚೆರ್ಕಳದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.







