ಬದಿಯಡ್ಕ: ವಾಹನಗಳಲ್ಲಿ ಹಿಂಬಾಲಿಸಿಕೊಂಡು ಬಂದ ತಂಡವೊಂದು ಸ್ನೇಹತರಿಬ್ಬರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಐದು ಮಂದಿ ಯ ವಿರುದ್ದ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬದಿಯಡ್ಕ ವಳಮಲೆ ನಿವಾಸಿ ಧ್ವನೀಶ್ ಶೆಟ್ಟಿ ಸಿ.ಆರ್ (18) ಮತ್ತು ಆತನ ಸ್ನೇಹಿತ ಬದಿಯಡ್ಕ ಯಶ್ವಂತ್(19) ಎಂಬವರು ಹಲ್ಲೆಗೊಳಗಾಗಿದ್ದು, ಆ ಬಗ್ಗೆ ಧ್ವನೀಶ್ ನೀಡಿದ ದೂರಿನಂತೆ ಶುಹೈಬ್ (26), ಬದಿಯಡ್ಕದ ಹನನ್ ಶಹಲ್ (18) ಹಾಗೂ ಕಂಡರೆ ಗುರುತುಹಚ್ಚಲು ಸಾಧ್ಯವಾಗುವ ಇತರ ಮೂವರು ಸೇರಿದಂತೆ ಒಟ್ಟು ಐದು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬದಿಯಡ್ಕದಿಂದ ಸ್ನೇಹಿತ ಯಶ್ವಂತ್ನೊಂದಿಗೆ ನಾನು ಊಟ ಮಾಡಲೆಂದು ನಿನ್ನೆ ಮಧ್ಯಾಹ್ನ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಬದಿಯಡ್ಕ ಸರ್ಕಲ್ ಬಳಿ ಸುಮಾರು ೨೫ ಮಂದಿ ನಮ್ಮ ವಿರುದ್ಧ ಕೇಕೆ ಹಾಕಲು ಆರಂಭಿಸಿದರೆಂದೂ ನಂತರ ನಾವು ಅಲ್ಲಿಂದ ಮನೆಗೆ ಮರಳುತ್ತಿದ್ದ ವೇಳೆ ಎರಡು ಕಾರು ಮತ್ತು ಮೂರು ಸ್ಕೂಟರ್ ಗಳಲ್ಲಾಗಿ ಹಿಂಬಾಲಿಸಿಕೊಂಡು ಬಂದ ತಂಡ ನನ್ನ ಮನೆ ಮುಂದೆ ನನ್ನನ್ನು ಹಾಗೂ ಸ್ನೇಹಿತನನ್ನು ತಡೆದು ನಿಲ್ಲಿಸಿ ಕಬ್ಬಿಣದ ಸಲಾಖೆಯಿಂದ ಹೊಡೆದು ಗಾಯಗೊಳಿಸಿದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಗಾಯಾಳು ಧ್ವನೀಶ್ ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ನಾನು ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದೆನೆಂದೂ ಅದರ ದ್ವೇಷವೇ ಆರೋಪಿಗಳು ನನ್ನ ಮೇಲೆ ಹಲ್ಲೆ ನಡೆಸಲು ಕಾರಣವೆಂದು ದೂರಿನಲ್ಲಿ ಧ್ವನೀಶ್ ತಿಳಿಸಿದ್ದಾರೆ.






